






ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕನ್ನೊಳಗೊಂಡ ಉಪ ವಿಭಾಗ ಕಛೇರಿ ಇರುವ ಪುತ್ತೂರಿನ ಆಡಳಿತ ಸೌಧಕ್ಕೆ ವಯೋವೃದ್ಧರು, ಅಂಗವೈಕಲ್ಯ ಹೊಂದಿದ ಜನರು ಬರುವಂತಿಲ್ಲ. ಒಂದು ವೇಳೆ ಬರಲೇ ಬೇಕೆಂದಿದ್ದಲ್ಲಿ ಅಂತ ಜನ ತಮ್ಮ ಜೊತೆಗೆ ಇನ್ನೂ ನಾಲ್ಕೈದು ಜನರನ್ನ ಕರೆದುಕೊಂಡು ಬರಬೇಕಾಗುತ್ತೆ. ಈ ಕಛೇರಿಯ ಲಿಫ್ಟ್ ವ್ಯವಸ್ಥೆ ಹಾಳಾಗಿದ್ದು, ಲಿಫ್ಟ್ ಇಲ್ಲದೆ ಸರಕಾರಿ ಕಛೇರಿಗೆ ಹೋಗಲು ಇಲ್ಲಿ ಬೇರೆ ವ್ಯವಸ್ಥೆಗಳೇ ಇಲ್ಲ.
ದಕ್ಷಿಣಕನ್ನಡ ಜಿಲ್ಲೆಯ ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ ಹೀಗೆ ನಾಲ್ಕು ತಾಲೂಕುಗಳ ಉಪ ವಿಭಾಗ ಕಛೇರಿಯಿರುವ ಪುತ್ತೂರಿನ ತಾಲೂಕು ಆಡಳಿತ ಕಛೇರಿಯಲ್ಲಿ ಎರಡು ಅಂತಸ್ತುಗಳನ್ನು ಹೊಂದಿರುವ ಕಟ್ಟಡದಲ್ಲಿ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರ ಕಛೇರಿ, ಪುತ್ತೂರು ತಹಶೀಲ್ದಾರ್ ಕಛೇರಿ, ನೊಂದಣಾಧಿಕಾರಿ ಕಛೇರಿ, ಸರ್ವೆ ಇಲಾಖೆ ಹೀಗೆ ಹಲವು ಸರಕಾರಿ ಕಛೇರಿಗಳು ಕಾರ್ಯ ನಿರ್ವಹಿಸುತ್ತಿದೆ. ಇದೇ ಕಾರಣಕ್ಕೆ ಇಲ್ಲಿಗೆ ದಿನಕ್ಕೆ ನೂರಾರು ಜನ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಈ ಕಟ್ಟಡದ ಲಿಫ್ಟ್ ವ್ಯವಸ್ಥೆ ಕೆಟ್ಟು ಹೋಗಿದೆ. ಇದರ ಪರಿಣಾಮ ಸರಕಾರಿ ಕೆಲಸಕ್ಕಾಗಿ ಬರುವ ವಯೋವೃದ್ಧರು ಅಂಗವೈಕಲ್ಯತೆಯಿಂದ ಬಳಲುತ್ತಿರುವವರ ಮೇಲೆ ಬೀರಿದೆ. ಮಹಡಿಗೆ ಹತ್ತಲು ಇಲ್ಲಿ ಸ್ಟೇರ್ ಕೇಸ್ ಮತ್ತು ಲಿಫ್ಟ್ ನ ವ್ಯವಸ್ಥೆ ಮಾತ್ರ ಇದ್ದು, ಲಿಫ್ಟ್ ಕಾರ್ಯ ನಿರ್ವಹಿಸದ ಕಾರಣ ಆರೋಗ್ಯ ಸಮಸ್ಯೆ ಇರುವ ಜನರನ್ನು ಹೊತ್ತುಕೊಂಡೇ ಕಛೇರಿ ಅಲೆಯಬೇಕಾದ ಸ್ಥಿತಿಯಿದೆ.
ಹೆಚ್ಚಾಗಿ ಆಸ್ತಿ ನೊಂದಣಿ ವಿಚಾರವಾಗಿ ಕುಟುಂಬದ ಎಲ್ಲಾ ಸದಸ್ಯರು ಬರಬೇಕಾದ ಹಿನ್ನಲೆಯಲ್ಲಿ ವಯೋವೃದ್ಧರೂ ಇಲ್ಲಿಗೆ ಆಗಮಿಸುತ್ತಾರೆ. ಲಿಫ್ಟ್ ಇರುವ ಸಂದರ್ಭದಲ್ಲಿ ಲಿಫ್ಟ್ ಮೂಲಕವೇ ವೃದ್ಧರನ್ನು ಕರೆದೊಯ್ಯಲಾಗುತ್ತಿತ್ತು. ಆದರೆ ಇಂದು ಹೊತ್ತುಕೊಂಡೇ ಹೋಗಬೇಕಾದ ಸ್ಥಿತಿಯಿದೆ. ಲಿಫ್ಟ್ ಅನ್ನ ರಿಪೇರಿ ಮಾಡಬೇಕೆಂದು ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದರೂ, ಈವರೆಗೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸಿಲ್ಲ.
ಲಿಫ್ಟ್ ಇಲ್ಲದೆ ಇದ್ದಲ್ಲಿ ಈ ಕಟ್ಟಡದ ಕಡೆಗೆ ವಯೋವೃದ್ಧರು ಮತ್ತು ಅಂಗವೈಕಲ್ಯತೆ ಇರುವವರು ಬರಲಾಗದ ಸ್ಥಿತಿ ನಿರ್ಮಾಣವಾಗಿದೆ ಇದರಿಂದಾಗಿ ಜನರ ಹಲವು ಕೆಲಸಗಳೂ ಕೂಡಾ ಬಾಕಿ ಉಳಿಯುವಂತಾಗಿದೆ.


