
ಪುತ್ತೂರು : ಉರಗ ಪ್ರೇಮಿ ಸ್ನೇಕ್ ತೇಜಸ್ ಅರಣ್ಯ ಇಲಾಖೆಗೆ ಆಪತ್ಭಾಂಧವರಾಗಿದ್ದು, ಉರಗ ರಕ್ಷಣೆಯ ಕಾಯಕದ ಮೂಲಕ ಜೀವವೈವಿಧ್ಯಗಳ ರಕ್ಷಣೆಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಹೇಳಿದ್ದಾರೆ.

ರೋಟರಿ ಪುತ್ತೂರು ಎಲೈಟ್ ವತಿಯಿಂದ “ವಿಶ್ವ ಹಾವುಗಳ ದಿನಾಚರಣೆ” ಅಂಗವಾಗಿ ಮಂಗಳವಾರ ವಲಯ ಅರಣ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ಉರಗ ಪ್ರೇಮಿ ಸ್ನೇಕ್ ತೇಜಸ್ ಅವರನ್ನು ಗೌರವಿಸಿ ಮಾತನಾಡಿದರು.
ಹಾವುಗಳನ್ನು ಹಿಡಿಯುವುದನ್ನು ಕೆಲವರು ಫ್ಯಾಷನ್ ಎಂದು ಕೊಳ್ಳುತ್ತಾರೆ, ಅಂತಹಾ ಸಂದರ್ಭದಲ್ಲಿ ಅಪಾಯಗಳು ಹೆಚ್ಚು. ಆದರೆ ತೇಜಸ್ ಅವರು ಉರಗ ರಕ್ಷಣೆಯ ಕಾಳಜಿಯುಳ್ಳವರಾಗಿದ್ದು , ಇತರರಿಗೂ ಅನುಕರಣೀಯರಾಗಿದ್ದಾರೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಸ್ನೇಕ್ ತೇಜಸ್ ಅವರು, ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಂಡಿದ್ದ ಹಾವು ರಕ್ಷಣೆಯ ಹವ್ಯಾಸ ನನಗೆ ಶ್ರೀರಕ್ಷೆಯಾಗಿದೆ, ಈವರೆಗೆ ಸುಮಾರು 7ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ ಹೆಮ್ಮೆ ಇದೆ ಎಂದರು.
ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ರೊ.ಆಸ್ಕರ್ ಆನಂದ್, ಕ್ಲಬ್ ಟ್ರೈನರ್ ರೊ.ಶಾಕೀರ್ ಉಪಸ್ಥಿತರಿದ್ದರು.ಕ್ಲಬ್ ಕಾರ್ಯದರ್ಶಿ ರೊ.ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.


