ಆಹಾರ ಇಲಾಖೆ ದಿಢೀರ್ ದಾಳಿ: ಸ್ಟಾರ್ ಹೋಟೆಲ್ ಗಳಲ್ಲಿ ಅವಧಿ ಮೀರಿದ ಹಾಲು, ಕೊಳೆತ ತರಕಾರಿ ಪತ್ತೆ ..!!

ಬೆಂಗಳೂರಿನ ಪ್ರತಿಷ್ಠಿತ ಪಂಚತಾರಾ (ಸ್ಟಾರ್) ಹೋಟೆಲ್‌ಗಳ ಮೇಲೆ ಆರೋಗ್ಯ ಮತ್ತು ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ನಿನ್ನೆ ದಿಢೀರ್ ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಆಹಾರದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನೀಡಿರುವ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಈ ವ್ಯಾಪಕ ಪರಿಶೀಲನಾ ಕಾರ್ಯಚರಣೆ ನಡೆದಿದೆ. ಹೋಟೆಲ್‌ಗಳಲ್ಲಿ ನಿಯಮ ಉಲ್ಲಂಘನೆ ಅಥವಾ ನೈರ್ಮಲ್ಯದ ಕೊರತೆ ಕಂಡುಬಂದರೆ ಯಾವುದೇ ದಾಕ್ಷಿಣ್ಯವಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಆಹಾರ ಭದ್ರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ರಾಜ್ಯಾದ್ಯಂತ ಒಟ್ಟು 30 ವಿಶೇಷ ತನಿಖಾ ತಂಡಗಳನ್ನು ರಚಿಸಿದೆ. ಬೆಂಗಳೂರಿನ ಎಲ್ಲಾ ಪ್ರಮುಖ ಪಂಚತಾರಾ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಅಧಿಕಾರಿಗಳು, ಅಡುಗೆ ಮನೆ, ಶೀತಲೀಕರಣ ವ್ಯವಸ್ಥೆ (ಕೋಲ್ಡ್ ಸ್ಟೋರೇಜ್) ಹಾಗೂ ದಾಸ್ತಾನು ಮಳಿಗೆಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುತ್ತಿದ್ದಾರೆ.

ಈ ದಿಢೀರ್ ದಾಳಿಯ ವೇಳೆ ಹಲವು ಹೆಸರಾಂತ ಸ್ಟಾರ್ ಹೋಟೆಲ್‌ಗಳಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಅಡುಗೆಗೆ ಬಳಸಲು ಇಡಲಾಗಿದ್ದ ಕೊಳೆತ ಈರುಳ್ಳಿ, ಆಲೂಗಡ್ಡೆ, ಕಳಪೆ ಗುಣಮಟ್ಟದ ತರಕಾರಿಗಳು ಹಾಗೂ ಅವಧಿ ಮೀರಿದ (ಎಕ್ಸ್‌ಪೈರ್ಡ್) ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನಗರದ ಪ್ರತಿಷ್ಠಿತ ‘ಲಲಿತ್ ಅಶೋಕ್’ ಹೋಟೆಲ್ ಮೇಲೆಯೂ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ಸುದೀರ್ಘ ಪರಿಶೀಲನೆ ನಡೆಸಿದ್ದು, ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದೆ.

Star Of Kudla

Learn More →

Leave a Reply

Your email address will not be published. Required fields are marked *