ಪುತ್ತೂರು: ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮರ, ಸಾಗಾಟಕ್ಕೆ ಬಳಸಿದ ಲಾರಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಆ.14ರಂದು ನಡೆದಿದೆ.


ಮಾಡಾವು ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿ. ನೆಟ್ಟಾರು ಎಂಬಲ್ಲಿಂದ ಅಕ್ರಮವಾಗಿ ಕಿರಾಲು ಭೋಗಿ ಜಾತಿಯ ಮರಗಳನ್ನು ಕಡಿದು ಅದನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಬೆಳ್ಳಾರೆಯಿಂದ ಪುತ್ತೂರಿಗೆ ಬರುತ್ತಿದ್ದ ಲಾರಿಯನ್ನು ಕೆಯ್ಯೂರು ಗ್ರಾಮದ ಸಂತೋಷ್ ನಗರ ಎಂಬಲ್ಲಿ ತಡೆದು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಮರ, ಸಾಗಾಟಕ್ಕೆ ಬಳಸಿದ ಲಾರಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ಲಾರಿ ಹಾಗೂ ಮರದ ಒಟ್ಟು ಮೌಲ್ಯ ರೂ.5ಲಕ್ಷ ಎಂದು ಅಂದಾಜಿಸಲಾಗಿದೆ.
ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಸಂತೋಷ್ ರೈ, ಉಪವಲಯ ಅರಣ್ಯ ಅಧಿಕಾರಿಗಳಾದ ಶಿವಾನಂದ ಹಾಗೂ ಸೋಮನಾಥ್ ಮತ್ತೆ ವಾಹನ ಚಾಲಕ ಜಯಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ರೋಶಿನಿ ಎ. ಜೆ ಅವರ ಆದೇಶದಂತೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ


