
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಅಕ್ರಮ-ಸಕ್ರಮದ ವಿಚಾರವೇ ಎಲ್ಲೆಡೆ ಚರ್ಚೆಯ ವಸ್ತುವಾಗಿ ಹರಿದಾಡುತ್ತಿದೆ. ಯಾವಾಗ ಪುತ್ತೂರು ತಹಶೀಲ್ದಾರ್ ಭ್ರಷ್ಟಾಚಾರ ಆರೋಪದಡಿ ಸಿಕ್ಕಿಹಾಕಿಕೊಂಡೋ, ಆ ಬಳಿಕ ಈ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವಿಚಾರವಾಗಿ ಕಾಂಗ್ರೇಸ್ ಮತ್ತು ಬಿಜೆಪಿ ನಡುವೆ ನಡೆದ ವಾಕ್ಸಮರ ಇದೀಗ ಆಣೆ ಪ್ರಮಾಣ ಮಾಡುವ ಹಂತದವರೆಗೂ ತಲುಪಿದೆ.
ಅಗಸ್ಟ್ 28 ರಂದು ಲೋಕಾಯುಕ್ತ ಪೋಲೀಸರು ತಹಶೀಲ್ದಾರ್ ಕಛೇರಿಗೆ ದಾಳಿ ಮಾಡಿ, ಅಲ್ಲಿನ ಭೂಮಿ ಶಾಖೆಯ ಸಿಬ್ಬಂದಿ ಅಕ್ರಮ-ಸಕ್ರಮ ಮಂಜೂರಾತಿಗೆ ನಿರಾಪೇಕ್ಷಣಾ ಪತ್ರಕ್ಕಾಗಿ ಲಂಚ ಪಡೆಯುತ್ತಿದ್ದ ಸಿಬ್ಬಂದಿಯೋರ್ವನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳಿ ಆರೋಪಿ ಸಿಬ್ಬಂದಿ ಸುನಿಲ್ ಹಣದಲ್ಲಿ ತಹಶೀಲ್ದಾರ್ ಪಾಲು ಕೂಡಾ ಇದೆ ಎನ್ನುವ ವಿಚಾರವನ್ನು ತಿಳಿಸಿದ್ದ. ಇದೇ ವಿಚಾರವಾಗಿ ಅಂದು ಲೋಕಾಯುಕ್ತ ಪೋಲೀಸರು ತಹಶೀಲ್ದಾರ್ ಗೆ ಕರೆ ಮಾಡಿದರೂ ಕಛೇರಿಗೆ ಬರದೆ ಬಳಿಕ ಅಧಿಕೃತ ರಜೆಯನ್ನೂ ಪಡೆಯದೆ ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ,ಮಾಜಿ ಶಾಸಕ ಸಂಜೀವ ಮಠಂದೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕ ಸಂಜೀವ ಮಠಂದೂರು 47 ಜನರಿಂದ ಅಕ್ರಮ-ಸಕ್ರಮ ಮಂಜೂರಾತಿಗೆ ತಲಾ ಎರಡು ಲಕ್ಷದಂತೆ ಲಂಚ ಪಡೆದಿದ್ದರು. ಓರ್ವ ಮಹಿಳೆ ತನ್ನ ದನವನ್ನು ಮಾರಾಟ ಮಾಡಿ ಹಣ ನೀಡಿದ್ದರು ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಮಹಾಲಿಂಗೇಶ್ವರ ದೇವರ ಮುಂದೆ ಪ್ರಮಾಣಕ್ಕೆ ಬರಲಿ ಎಂದು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ಇದೀಗ ಶಾಸಕರಿಗೆ ಎಲ್ಲಾ 47 ಜನರನ್ನ ಎಲ್ಲಿ ಬೇಕಾದರೂ ಕರೆತನ್ನಿ, ನಾವು ಮಾಜಿ ಶಾಸಕ ಮತ್ತು ಅಂದಿನ ಎಲ್ಲಾ ಅಕ್ರಮ-ಸಕ್ರಮ ಸಮಿತಿ ಸದಸ್ಯರನ್ನ ಕರೆತರುವುದಾಗಿ ಪ್ರತಿಸವಾಲ್ ಹಾಕಿದ್ದಾರೆ.
ದಯಾನಂದ ಉಜಿರೆಮಾರ್,
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಳಿ ಅಧ್ಯಕ್ಷ.
ಬಿಜೆಪಿ ಪ್ರತಿ ಸವಾಲ್ ಗೆ ಶಾಸಕ ಅಶೋಕ್ ಕುಮಾರ್ ರೈ ಕೂಲಾಗಿ ಪ್ರತಿಕ್ರಿಯಿಸಿದ್ದಾರೆ. 47 ಜನ ಬೇಡ, ಮೊದಲಿಗೆ ಇಬ್ಬರನ್ನು ಕರೆತರುತ್ತೇನೆ. ಅವರನ್ನು ತಹಶೀಲ್ದಾರ್ ಕಛೇರಿಯಲ್ಲೇ ವಿಚಾರಣೆ ಮಾಡುವ. 87 ಫೈಲ್ ಗಳು ಈಗಲೂ ನನ್ನ ಬಳಿಯಿದೆ. ಒಂದು ಫೈಲ್ ಗೆ 6 ಲಕ್ಷ ನೀಡಿದ ಅರ್ಜಿದಾರನೂ ನನ್ನ ಬಳಿ ಇದ್ದಾನೆ. ನಾನು ಈ ಬಾರಿ ಬಿಜೆಪಿಯವರನ್ನು ಕ್ಷಮಿಸುತ್ತೇನೆ. ನನಗೆ ಚಾಲೆಂಜ್ ಹಾಕಿದರೆ ಮತ್ತೆ ಸುಮ್ಮನಿರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಶೋಕ್ ಕುಮಾರ್ ರೈ,
ಶಾಸಕರು,ಪುತ್ತೂರು.
ಅಕ್ರಮ-ಸಕ್ರಮ ಮಂಜೂರಾತಿಗೆ ಅದಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳೂ ಲಂಚ ಪಡೆಯುತ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಗುಪ್ತವಾಗಿಯೇ ನಡೆಯುತ್ತಿದ್ದ ಈ ವ್ಯವಹಾರ ಇದೀಗ ಬಹಿರಂಗವಾಗಿ ಚರ್ಚೆಯಾಗುತ್ತಿದ್ದು, ಇದು ಯಾವ ಹಂತಕ್ಕೆ ಬಂದು ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.


