
ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಕುಂಭಾಸಿ ನೇಮಕ..!
ಪತ್ರಕರ್ತರ ಧ್ವನಿಗೆ ಮತ್ತಷ್ಟು ಬಲ – ಅಭಿನಂದನೆಗಳ ಮಹಾಪೂರ..!!


ಉಡುಪಿ: ಪತ್ರಕರ್ತರ ಹಕ್ಕುಗಳ ರಕ್ಷಣೆ, ವೃತ್ತಿಪರ ಸಮಸ್ಯೆಗಳ ಪರಿಹಾರ ಹಾಗೂ ಪತ್ರಕರ್ತರ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
‘ಕರಾವಳಿ ಚಾಣಕ್ಯ’ ಪತ್ರಿಕೆಯ ಸಂಪಾದಕರಾದ ಹರೀಶ್ ಕುಂಭಾಸಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ಸಂಘಟನೆಯ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ. ಮಲ್ಲಿಕಾರ್ಜುನ ಅವರು 14 ಸೆಪ್ಟೆಂಬರ್ 2026ರಂದು ನೇಮಕಾತಿ ಆದೇಶ ಹೊರಡಿಸಿದ್ದಾರೆ.
ನೂತನ ಜವಾಬ್ದಾರಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಿ ಸಂಘಟಿಸುವುದು, ಪತ್ರಕರ್ತರ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ವೃತ್ತಿಪರ ಸಮಸ್ಯೆಗಳಿಗೆ ಧ್ವನಿಯಾಗುವ ಮಹತ್ವದ ಜವಾಬ್ದಾರಿ ಹರೀಶ್ ಕುಂಭಾಸಿ ಅವರ ಹೆಗಲೇರಿದೆ.
ಇನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ದಾಮೋದರ ಮೊಗವೀರ ನಾಯಕವಾಡಿ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ಕೆ ಸಿದ್ಧತೆಗಳು ಚುರುಕುಗೊಂಡಿವೆ.
ಪತ್ರಕರ್ತರ ಒಗ್ಗಟ್ಟು, ಹಕ್ಕುಗಳ ರಕ್ಷಣೆ ಹಾಗೂ ವೃತ್ತಿಯ ಘನತೆಗಾಗಿ ಸಂಘಟನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಟ್ಟುವ ನಿಟ್ಟಿನಲ್ಲಿ ನೂತನ ಸಂಘಟನಾ ಕಾರ್ಯದರ್ಶಿಯ ನೇಮಕ ಮಹತ್ವ ಪಡೆದುಕೊಂಡಿದೆ.
ಹರೀಶ್ ಕುಂಭಾಸಿ ಅವರಿಗೆ ನೂತನ ಜವಾಬ್ದಾರಿ ದೊರೆತ ಹಿನ್ನೆಲೆಯಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತರು ಹಾಗೂ ಸಂಘಟನೆಯ ಪ್ರಮುಖರು ಹರ್ಷ ವ್ಯಕ್ತಪಡಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


