ಉಜಿರೆ; ಮನೋಜ್ ಕುಂಜರ್ಪ ಗಡಿಪಾರು ಅರ್ಜಿ ವಾಜಾಗೊಳಿಸಿ ಪುತ್ತೂರು ಎ.ಸಿ ಆದೇಶ

ಬೆಳ್ತಂಗಡಿ; ಉಜಿರೆಯ ಮನೋಜ್ ಕುಂಜರ್ಪ ಎಂಬಾತನನ್ನು ಗಡಿಪಾರು ಮಾಡಲು ಬೆಳ್ತಂಗಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯ ತಿರಸ್ಕರಿಸಿದೆ.
ಮನೋಜ್ ಕುಂಜರ್ಪ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಹತ್ತು ಪ್ರಕರಣಗಳು ದಾಖಲಾಗಿದ್ದು ಆತನ ವರ್ತನೆಯಿಂದ‌‌ ಸಾಮಾಜಿಕ‌ ಆಶಾಂತಿಗೆ ಹಾಗೂ ಗಲಭೆಗಳಿಗೆ ಕಾರಣವಾಗಲಿದೆ ಆದ್ದರಿಂದ‌ ಆತನನ್ನು ಬೆಳ್ತಂಗಡಿ ತಾಲೂಕಿನಿಂದ‌ ಗಡಿಪಾರು ಮಾಡುವಂತೆ ಬೆಳ್ತಂಗಡಿ ಪೊಲೀಸ್‌ ನಿರೀಕ್ಷಕರು ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದ್ದರು.
ಪ್ರಕರಣದ‌ ವಿಚಾರಣೆಯ ವೇಳೆ ಆರೋಪಿ ಪರ ವಾದ‌ಮಂಡಿಸಿದ ವಕೀಲರು ಪೊಲೀಸರ ಆರೋಪಗಳನ್ನು ತಳ್ಳಿಹಾಕಿ ಹತ್ತರಲ್ಲಿ ಐದು ಪ್ರಕರಣಗಳು ಈಗಾಗಲೇ ಖುಲಾಸೆ ಗೊಂಡಿದ್ದು ಐದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಇತ್ತೀಚೆಗಿನ ಮೂರು ಪ್ರಕರಣಗಳು ಗುರುತರವಾದ ಆರೋಪಗಳದ್ದಲ್ಲ ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯ
ಗಡೀಪಾರು ಕೋರಿಕೆಯನ್ನು ತಿರಸ್ಕರಿಸಿದೆ.
ಸದ್ರಿ ಆರೋಪಿಯು ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಯಾವುದೇ‌ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಮತ್ತು ಅರೋಪಿಯ ಬಗ್ಗೆ ಯಾವುದೇ‌ ತರಹದ ದೂರುಗಳು ಬಂದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶ ಕಾಯ್ದಿರಿಸುತ್ತಾ, ಸದ್ರಿ ಗಡಿಪಾರು ಪ್ರಸ್ತಾವನೆಯನ್ನು ಈ ಹಂತದಲ್ಲಿಯೇ ತಿರಸ್ಕರಿಸುವುದಾಗಿ ಸೆ. 4ರಂದು ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್‌ ಆದೇಶ ನೀಡಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *