ಬೈಂದೂರು: ತಾಲೂಕಿನ ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವ್ರತಚರಣೆಯು ಭಕ್ತಿ-ಶ್ರದ್ಧೆ ಹಾಗೂ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ಮುಂದುವರಿದಿದೆ.
ಇಂದು (ಆಗಸ್ಟ್ 09, 2026) ಚಾತುರ್ಮಾಸ ವ್ರತಚರಣೆಯ ಅಂಗವಾಗಿ ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯದ ವತಿಯಿಂದ ನೂರಾರು ಭಕ್ತರು ಒಗ್ಗೂಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.


ಯಡ್ತರೆ ಸರ್ಕಲ್ನಿಂದ ಹೊರಟ 300ಕ್ಕೂ ಅಧಿಕ ಸಂಖ್ಯೆಯ ಭಕ್ತರು, ವಿನಾಯಕ ದೇವಸ್ಥಾನದವರೆಗೆ ಪಾದಯಾತ್ರೆಯ ಮೂಲಕ ಸಾಗಿ ಭಕ್ತಿಪೂರ್ವಕವಾಗಿ ಸಾಗಿದರು. ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನವನ್ನು ತಲುಪಿದ ಪಾದಯಾತ್ರಿಗಳು ಶ್ರೀಗಳ ದರ್ಶನ ಪಡೆದು, ಅವರ ಅಮೃತವಾಣಿಯನ್ನು ಆಲಿಸಿ ಪರಮಪೂಜ್ಯರ ದಿವ್ಯ ಆಶೀರ್ವಾದವನ್ನು ಪಡೆದರು.
ಧಾರ್ಮಿಕ ಭಾವನೆಯ ಸಂಚಲನ
ಕ್ಷೇತ್ರದ ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿದಿನವೂ ವಿವಿಧ ಗ್ರಾಮಗಳ ಭಕ್ತರು ವಿಭಿನ್ನ ಶೈಲಿಯಲ್ಲಿ ಮತ್ತು ವಿನೂತನ ಕಾರ್ಯಕ್ರಮಗಳೊಂದಿಗೆ ಚಾತುರ್ಮಾಸ ವ್ರತಚರಣೆಗೆ ಆಗಮಿಸುತ್ತಿದ್ದಾರೆ. ಈ ಅಪರೂಪದ ಧಾರ್ಮಿಕ ಆಚರಣೆಯು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಬೈಂದೂರು ಕ್ಷೇತ್ರದಾದ್ಯಂತ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಭಾವನೆ ಗಣನೀಯವಾಗಿ ಹೆಚ್ಚಲು ಈ ಚಾತುರ್ಮಾಸ ಮಹತ್ವದ ಸಾಕ್ಷಿಯಾಗುತ್ತಿದೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ


