
ಅನುಕಂಪದ ಉದ್ಯೋಗ ನೀಡುವ ಅರ್ಜಿಯನ್ನು ಪರಿಗಣಿಸುವ ಸಂದರ್ಭದಲ್ಲಿ ಕೇವಲ ‘ಹುದ್ದೆ ಖಾಲಿ ಇಲ್ಲ’ ಎಂಬ ಕಾರಣಕ್ಕೆ ಅರ್ಜಿದಾರರಿಗೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಾಗಲಕೋಟೆಯ ಸಂತೋಷ್ ಯಮನಪ್ಪ ವಡಕರ್ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಅನುಕಂಪದ ಉದ್ಯೋಗ ನೀಡುವ ಅರ್ಜಿಯನ್ನು ನಿರ್ವಹಿಸುವಾಗ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬದ್ಧರಾಗಿರಬೇಕು. ಹುದ್ದೆ ಖಾಲಿ ಇಲ್ಲ ಎಂದು ಅರ್ಜಿ ತಿರಸ್ಕರಿಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ತನ್ನ ತಂದೆ ಮೃತಪಟ್ಟ ಬಳಿಕ ಅನುಕಂಪದ ಉದ್ಯೋಗಕ್ಕಾಗಿ ಸಲ್ಲಿಸಿದ್ದ ಮನವಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ತಿರಸ್ಕರಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಮೃತರು ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲ ಎಂದಾದರೆ, ರಾಜ್ಯ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ, ಅನುದಾನ ಸಹಾಯ ಇತ್ಯಾದಿ) ತಿದ್ದುಪಡಿ ನಿಯಮಗಳು – 2010ರ ಷರತ್ತು 1(ಎ) ಮತ್ತು (ಬಿ) ಪ್ರಕಾರ ಶಿಕ್ಷಣ ಇಲಾಖೆಯ ನಿರ್ದೇಶಕರು ಖಾಲಿ ಹುದ್ದೆಯನ್ನು ಗುರುತಿಸಬೇಕು. ಒಂದು ವೇಳೆ ಖಾಲಿ ಹುದ್ದೆ ಲಭ್ಯವಾಗದೇ ಇದ್ದಲ್ಲಿ ಇಲಾಖೆಯ ಅಧೀನದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆ ಹುಡುಕಿ ಹಂಚಿಕೆ ಮಾಡಬೇಕು’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮೃತ ನೌಕರರು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಯಾವುದೇ ಹುದ್ದೆಗಳು ಲಭ್ಯವಿಲ್ಲದಿದ್ದರೆ, ಪಿಯು ಶಿಕ್ಷಣದ ಉಪ ನಿರ್ದೇಶಕರು ಅದೇ ಜಿಲ್ಲೆಯ ಇತರ ಅನುದಾನಿತ ಪಿಯು ಕಾಲೇಜುಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಗುರುತಿಸಬೇಕು ಎಂದು ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ ಎಂದು ನ್ಯಾಯಾಲಯವು ಗಮನಿಸಿತು.
ಇದಲ್ಲದೆ, ಮೃತ ಉದ್ಯೋಗಿ ಕೆಲಸ ಮಾಡಿದ ಕಾಲೇಜು ಮತ್ತು ಆ ಜಿಲ್ಲೆಯೊಳಗಿನ ಯಾವುದೇ ಅನುದಾನಿತ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದಿದ್ದಾಗ, ರಾಜ್ಯದಾದ್ಯಂತ ಇರುವ ಯಾವುದೇ ಅನುದಾನಿತ ಪಿಯು ಕಾಲೇಜುಗಳಲ್ಲಿ ಅನುಕಂಪದ ನೇಮಕಾತಿಗೆ ಅರ್ಹ ವ್ಯಕ್ತಿಗಳನ್ನು ಪರಿಗಣಿಸಲು ನಿಯಮಗಳು ಅವಕಾಶ ನೀಡುತ್ತವೆ ಎಂದು ನ್ಯಾಯಾಲಯವು ಗಮನಿಸಿದೆ.


