
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ತುಂಬಾ ಹೈಲೇಟ್ ಆಗಿ ಮಾರ್ಪಟ್ಟಿದೆ. ಡಿಕೆ ಬ್ರದರ್ಸ್ ಗಂತೂ ಈ ಸಲ ಚುನಾವಣೆ ಅಳಿವು-ಉಳಿವಿನ ಪ್ರಶ್ನೆ ಆಗಿದೆ. ಹೀಗಾಗಿ ಗೆಲುವು ತುಂಬಾ ಅನಿವಾರ್ಯ ಕೂಡ ಹೌದು. ಈ ಹಿನ್ನೆಲೆಯಲ್ಲಿ ಡಿ ಕೆ ಸುರೇಶ್(DK Suresh) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಈ ಚುನಾವಣಾ ಪ್ರಚಾರ ವೇಳೆ ಅವರು ಸಿಎಂ ಸಿದ್ದರಾಮಯ್ಯನವರ(CM Siddaramaiah) ಮೂಲ ನಮ್ಮದಲ್ಲ ಎಂದು ಹೇಳಿದ್ದಾರೆ. ರಾಮನಗರದಲ್ಲಿ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ ಸುರೇಶ್, ಕಾರ್ಯಕರ್ತರಿಗೆ ಕಿವಿಮಾತು ಹೇಳುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿಚಾರವನ್ನು ಪ್ರಸ್ತಾಪ ಮಾಡಿ, ಸಿದ್ದರಾಮಯ್ಯನವರ ಮೂಲ ನಮ್ಮ ಪಕ್ಷ ಅಲ್ಲ, ಬೇರೆ ಪಕ್ಷದಿಂದ ಬಂದವರು. ಆದರೆ 2 ಬಾರಿ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ. ಇತರ ಪಕ್ಷಗಳ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಮಾತನಾಡುವಾಗ ಅವರು ಈ ವಿಚಾರ ಪ್ರಸ್ತಾಪಿಸಿದ್ದು, ಪಕ್ಷಕ್ಕೆ ಯಾರೇ ಬಂದರೂ ಅವರಿಗೆ ಅಡ್ಡ ಹಾಕಲು ಹೋಗಬೇಡಿ. ಏಕೆಂದರೆ ಯಾರ ಹಣೆಯಲ್ಲಿ ಏನು ಬರೆದಿದ್ದರೆ ಎಲ್ಲವೂ ಆಗುತ್ತೆ, ಹುಡುಕಿ ಬರುತ್ತೆ, ಇಲ್ಲಾಂದ್ರೆ ಆಗಲ್ಲ. ನೀವು ಯಾರನ್ನು ಅಡ್ಡಹಾಕಬೇಡಿ, ನೀವು ಅಡ್ಡ ಹಾಕಿದರೆ ಅವರು ಲೀಡರ್ ಆಗ್ತಾರೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನವರು ಬೀಗ ಹಾಕಿ ಕಳುಹಿಸಿದ್ದರು. ಅವರ ಯೋಗ ಇಲ್ಲಿ ಇತ್ತು, ಹಾಗಾಗಿ ಅವರು ಇಲ್ಲಿಗೆ ಬಂದರು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರನ್ನು ಮತ್ತೆ ಹಾಡಿ ಹೊಗಳಿದ ಅವರು ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿದ್ದಾರೆ. ಬಡವರಿಗಾಗಿ ಒಂದಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಗಾಗಿ ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಅಂದ್ರೆ ಏನೂ ಮಾಡೋಕಾಗಲ್ಲ ಎಂದು ನುಡಿದಿದ್ದಾರೆ



