ಪುತ್ತೂರು: ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಕಚೇರಿಯಲ್ಲಿ ಮತ್ತೊಂದು ವಿಶಿಷ್ಟ ಹಾಗೂ ಮಾದರಿ ಜನಪರ ಕಾರ್ಯಕ್ರಮಕ್ಕೆ ಆ. 31 ರ ಸೋಮವಾರದಂದು ಚಾಲನೆ ನೀಡಲಾಗಿದೆ. ಕಚೇರಿಗೆ ಬರುವ ಸಾರ್ವಜನಿಕರಿಗಾಗಿ ಮಧ್ಯಾಹ್ನ ಕರಾವಳಿಯ ಸಾಂಪ್ರದಾಯಿಕ ‘ಗಂಜಿ ಊಟ’ದ ವ್ಯವಸ್ಥೆಯನ್ನು ಆರಂಭಿಸಲಾಗಿದೆ.


ಪ್ರತೀ ಸೋಮವಾರದಂದು ಪುತ್ತೂರಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಜನಸ್ಪಂದನ ಕಾರ್ಯಕ್ರಮ ನಡೆಯುತ್ತದೆ. ಈ ವೇಳೆ ತಾಲೂಕಿನ ಗ್ರಾಮೀಣ ಭಾಗಗಳು ಹಾಗೂ ಮೂಲೆ ಮೂಲೆಗಳಿಂದ ಬಡವರು, ಕಾರ್ಮಿಕರು ಸೇರಿದಂತೆ ನೂರಾರು ಜನ ಆಗಮಿಸುತ್ತಾರೆ. ಅರ್ಜಿ ಸಲ್ಲಿಸಿ, ಶಾಸಕರನ್ನು ಭೇಟಿಯಾಗಿ ಹೋಗುವಷ್ಟರಲ್ಲಿ ಮಧ್ಯಾಹ್ನವಾಗುವುದರಿಂದ, ಕಚೇರಿಗೆ ಬರುವ ಯಾರೂ ಹಸಿದ ಹೊಟ್ಟೆಯಲ್ಲಿ ಮರಳಬಾರದು ಎಂದು ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಇನ್ಮುಂದೆ ಕಚೇರಿಗೆ ಬರುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಮಧ್ಯಾಹ್ನದ ವೇಳೆ ಬಿಸಿ ಬಿಸಿ ಕುಚ್ಚಲಕ್ಕಿ ಗಂಜಿ, ಚಟ್ನಿ ಹಾಗೂ ಉಪ್ಪಿನಕಾಯಿಯ ಸರಳ ಮತ್ತು ಸಾತ್ತ್ವಿಕ ಆಹಾರದ ವ್ಯವಸ್ಥೆ ಇರಲಿದೆ. ಕಚೇರಿಗೆ ಬಂದ ಸಾರ್ವಜನಿಕರು ಶಾಸಕರ ಕಚೇರಿಯ ಈ ಅತಿಥ್ಯವನ್ನು ಸ್ವೀಕರಿಸಿ, ಶಾಸಕರ ಜನಸ್ನೇಹಿ ಕಾಳಜಿಗೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಜನಪ್ರತಿನಿಧಿಯೊಬ್ಬರ ಕಚೇರಿಯಲ್ಲಿ ಕರಾವಳಿಯ ಸಾಂಪ್ರದಾಯಿಕ ಶೈಲಿಯ ಈ ಅಪರೂಪದ ವ್ಯವಸ್ಥೆ ಆರಂಭವಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.


