
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಪ್ರಯಾಣಿಕರು ತಮ್ಮ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಒಂದೆಡೆ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಕಾಮಗಾರಿ ನಡೆಯದೆ ಜನರಿಗೆ ಸಮಸ್ಯೆಯಾಗುತ್ತಿದೆ. ಇಂತಹುದೇ ಒಂದು ರಸ್ತೆ ಸ್ಪೀಕರ್ ಯು.ಟಿ.ಖಾದರ್ ಪ್ರತಿನಿಧಿಸುವ ಕ್ಷೇತ್ರದಲ್ಲಿದ್ದು, ಅತೀ ಪ್ರಮುಖ ರಸ್ತೆಯಾಗಿರುವ ಇದರಲ್ಲಿ ಗುಂಡಿಗಳ ಹೊಂಡ-ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣಗೊಂಡಿದೆ.
ಇದು ದಕ್ಷಿಣಕನ್ನಡ ಜಿಲ್ಲೆಯ ಅತ್ಯಂತ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಒಂದು. 4 ಮೆಡಿಕಲ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ, ಇನ್ಫೋಸಿಸ್, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ವಲಯ ಹೀಗೆ ಹಲವು ಶಿಕ್ಷಣ ಸಂಸ್ಥೆ, ಉದ್ಯಮ ವಲಯಗಳನ್ನು ಈ ರಸ್ತೆ ಸಂಪರ್ಕಿಸುವ ಹಿನ್ನಲೆಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಇದು ಅತ್ಯಂತ ಅನಿವಾರ್ಯದ ಮತ್ತು ಪ್ರಾಮುಖ್ಯದ ರಸ್ತೆಯಾಗಿಯೂ ಗುರುತಿಸಿಕೊಂಡಿದೆ.
ಆದರೆ ಕಳೆದ ಒಂದು ವರ್ಷದಿಂದ ಈ ರಸ್ತೆಯು ನಾದುರಸ್ತಿಯಲ್ಲಿದ್ದು, ಹೊಂಡ-ಗುಂಡಿಗಳಿಂದ ತುಂಬಿದ ರಸ್ತೆಯಾಗಿ ಮಾರ್ಪಟ್ಟಿದೆ. ಸ್ಪೀಕರ್ ಯು.ಟಿ.ಖಾದರ್ ಪ್ರತಿನಿಧಿಸುವ ಕ್ಷೇತ್ರದ ಪ್ರಮುಖ ರಸ್ತೆ ಇದಾಗಿದ್ದರೂ, ಈವರೆಗೂ ಈ ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚಿ ತೇಪೆ ಹಚ್ಚುವ ಕಾರ್ಯ ನಡೆದಿಲ್ಲ. ಹೊಂಡಗಳಿಗೆ ಜಲ್ಲಿಕಲ್ಲು ಮತ್ತು ಮಣ್ಣು, ಜಲ್ಲಿ ಹುಡಿಗಳನ್ನು ಸೇರಿಸಿ ಹಾಕಲಾಗುತ್ತಿದೆ. ಮಣ್ಣು ಮತ್ತು ಜಲ್ಲಿ ಹುಡಿಯಿಂದ ರಸ್ತೆ ತುಂಬಾ ಧೂಳಾದರೆ, ಜಲ್ಲಿ ಕಲ್ಲುಗಳು ಹೊಂಡ ಬಿಟ್ಡು ರಸ್ತೆಯ ತುಂಬಾ ಹರಡಿ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಹೊಂಡ ತಪ್ಪಿಸಲು ಹೋಗುವ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಘಟನೆ ಪ್ರತಿದಿನವೂ ನಡೆಯುತ್ತಿದೆ.
ಕನಿಷ್ಟ ಪಕ್ಷ ಹೊಂಡ-ಗುಂಡಿಗಳನ್ನು ಮುಚ್ಚಿ ಡಾಂಬರು ಹಾಕುವ ಪ್ರಕ್ರಿಯೆಗೂ ಸರಕಾರ ಮುಂದಾಗಿಲ್ಲ. ಪ್ರತಿದಿನವೂ ಸಾವಿರಾರು ಸಂಖ್ಯೆಯ ವಾಹನಗಳು, ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಇಲಾಖೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಈ ರಸ್ತೆಯ ಸ್ಥಿತಿ ಶೋಚನೀಯ ಹಂತಕ್ಕೆ ತಲುಪಿದೆ. ಹೊಂಡಗಳಿಗೆ ಬಿದ್ದು ಪ್ರಯಾಣಿಕರ ಬೆನ್ನುಹುರಿಗೂ ಪೆಟ್ಟಾಗುತ್ತಿದ್ದು, ವಾಹನಗಳೂ ಗ್ಯಾರೇಜು ಸೇರುವಂತಾಗಿದೆ. ರಸ್ತೆಯ ಮೂಲಕವೇ ದುಡಿಯುವ ಜನ ಇದರಿಂದ ಸಮಸ್ಯೆಗೀಡಾಗಿದ್ದು, ಕೂಡಲೇ ರಸ್ತೆಯನ್ನು ದುರಸ್ತಿಪಡಿಸಬೇಕು ಎನ್ನುವ ಒತ್ತಡಗಳೂ ಕೇಳಿ ಬರಲಾರಂಭಿಸಿದೆ.
ಫ್ರೀ ಸ್ಕೀಮ್ ಗಳ ಮೂಲಕ ಹೆಸರುವಾಸಿಯಾದ ಸರಕಾರ ಇಂದು ಫ್ರೀ ಕಾರಣದಿಂದ ರಸ್ತೆಯ ತೇಪೆ ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ. ರಸ್ತೆಯ ಸ್ಥಿತಿ ಇದೇ ರೀತಿ ಮುಂದುವರಿದಲ್ಲಿ, ರಸ್ತೆ ಪ್ರಯಾಣಿಕರ ಆರೋಗ್ಯಕ್ಕೂ ಫ್ರೀ ಸ್ಕೀಮ್ ಆರಂಭಿಸಬೇಕಾಗಬಹುದು ಎನ್ನುವ ಮಾತುಗಳೂ ಇವೆ.


