
ಸ್ವಸಹಾಯ ಸಂಘವೊಂದರ ತಂಡದ ಸದಸ್ಯರು ಹಣ ಕಟ್ಟದ ವಿಚಾರವಾಗಿ ದೂರು ದಾಖಲಾದ ವಿಚಾರವಾಗಿ ಮಾತನಾಡಿ ವಾಪಾಸಗುತ್ತಿದ್ದ ವೇಳೆ ಸೌಜನ್ಯಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದವರ ಮೇಲೆ ವಾಹನ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಉಡುಪಿಯ ಕಾಪುವಿನಿಂದ ವರದಿಯಾಗಿದೆ.
ಕಡಬದ ಸಂಚಾರಿ ಸ್ಟುಡಿಯೋ ಸಂತೋಷ್, ನೀತಿ ಸಂಘಟನೆಯ ಜಯಂತ್ ಟಿ, ಸಾಮಾಜಿಕ ಹೋರಾಟಗಾರ ರವೀಂದ್ರ ಶೆಟ್ಟಿ , ಕಾರು ಚಾಲಕ ಜಯರಾಮ್ , ಅದೇ ಗ್ರಾಮದ ಸಂತೋಷ್ ಆಚಾರ್ಯ,ಆರತಿ ಎಂಬವರಿಗೆ ಹಲ್ಲೆ ಮಾಡಿದ್ದು ಗಾಯಾಳುಗಳು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಾಪು ತಾಲೂಕು ಎಲ್ಲೂರು ಗ್ರಾಮದ ದೇವಸ್ಥಾನದ ಎದುರು ಸೌಜನ್ಯ ಪರ ಹೋರಾಟಗಾರರ ವಾಹನವನ್ನು ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಮೊದಲು ಕಾರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದಲ್ಲದೆ, ಯುಟ್ಯೂಬರ್ ನ ವೀಡಿಯೋ ಕ್ಯಾಮರವನ್ನು ಹೊಡೆದು ಹಾಕಿ ಮೊಬೈಲ್ ಕೂಡ ವಶಕ್ಕೆ ಪಡೆದುಕೊಂಡಿರುವುದಾಗಿ ಎಫ್.ಐ. ಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಸುನಿಲ್ ಎಂಬಾತನ ಸಹಿತ ಇತರ ಹನ್ನೊಂದು ಜನರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಮಹೇಶ್ ತಿಮರೋಡಿ ಸಹಿತ ಇತರ ಸೌಜನ್ಯ ಪರ ಹೋರಾಟ ಗಾರರು ಆಸ್ಪತ್ರೆಗೆ ತೆರಳಿರುವುದಾಗಿ ತಿಳಿದು ಬಂದಿದೆ.


