ಮಂಜೇಶ್ವರ ತಾಯಿಯನ್ನೇ ಕೊಂದು ಸುಟ್ಟು ಹಾಕಿ ಪರಾರಿಯಾದ ಕಿರಾತಕ. ಆರೋಪಿ ಕುಂದಾಪುರದಲ್ಲಿ ಸೆರೆ.

ಮಂಗಳೂರು: ಹೆತ್ತ ತಾಯಿಯನ್ನು ಮಗನೇ
ಕೊಲೆಗೈದು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಗಡಿಭಾಗ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ನಡೆದಿದೆ.

ವರ್ಕಾಡಿ ಪಂಚಾಯತ್ ವ್ಯಾಪ್ತಿಯ ನಲ್ಲೆಂಗಿ ಪದವು ನಿವಾಸಿ ಹಿಲ್ದಾ ಮೊಂತೇರೊ (59) ಕೊಲೆಗೀಡಾದ ದುರ್ದೈವಿ. ಆಕೆಯ ಮಗ ಮೆಲ್ವಿನ್ ಮೊಂತೇರೊ (26) ಕೃತ್ಯ ಎಸಗಿರುವ ಆರೋಪಿಯಾಗಿದ್ದು ಕೃತ್ಯದ ಬಳಿಕ ಮನೆ ಬಿಟ್ಟು ನಾಪತ್ತೆಯಾಗಿದ್ದ. ಆರೋಪಿ ಯುವಕನನ್ನು ಕುಂದಾಪುರದಲ್ಲಿ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ತಡರಾತ್ರಿ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ತಾಯಿಗೆ ಬೆಂಕಿ ಹಚ್ಚಿದ ಬಳಿಕ ನೆರೆಮನೆಯಲ್ಲಿ ವಾಸವಿರುವ ಸಂಬಂಧಿಕ ಮಹಿಳೆ ಲೋಲಿಟಾ(30) ಅವರನ್ನು ಕರೆದಿದ್ದಾನೆ. ತಾಯಿ ಕಾಣಿಸುತ್ತಿಲ್ಲ, ಎಲ್ಲಿಗೋ ಹೋಗಿದ್ದಾರೆ ಅಂತ ಹೇಳಿದ್ದಾನೆ. ಆಕೆ ಮನೆ ಒಳಗಡೆ ಬಂದು ಹಿಂತಿರುಗಿ ಹೋಗುತ್ತಿದ್ದಾಗ ಆಕೆಯ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಹಿಳೆಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಮಹಿಳೆಯ ಗಂಡ ವಿದೇಶದಲ್ಲಿದ್ದು ಐದು ವರ್ಷದ ಮಗ ಜೊತೆಗಿದ್ದ. ಲೋಲಿಟಾ ಅವರ ಬೊಬ್ಬೆ ಕೇಳಿ ಪರಿಸರದ ನಿವಾಸಿಗಳು ಬಂದಿದ್ದು ಆಕೆಯನ್ನು ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆ ತೀವ್ರ ಸುಟ್ಟ ಗಾಯಕ್ಕಿಡಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕ ಹರ್ಷಾದ್ ವರ್ಕಾಡಿ ತಿಳಿಸಿದ್ದಾರೆ.

ಘಟನೆ ಬಳಿಕ ಮೆಲ್ವಿನ್ ಅಲ್ಲಿಂದ ಎರಡು ಕಿಮೀ ದೂರದ ಮಜಿರ್ಪಳ್ಳ ವರೆಗೆ ನಡೆದು ಹೋಗಿದ್ದು ಅಲ್ಲಿಂದ ಆಟೋ ಹಿಡಿದು ಹೊಸಂಗಡಿ ತೆರಳಿದ್ದು ಆಟೋದವರಲ್ಲಿ ಬಸ್ ಎಷ್ಟೊತ್ತಿಗೆ ಇದೆಯೆಂದು ವಿಚಾರಿಸಿದ್ದಾನೆ. ಅಲ್ಲಿಂದ ಮಂಗಳೂರು ಮೂಲಕ ಕುಂದಾಪುರ ತೆರಳಿದ್ದ ಎನ್ನುವ ಮಾಹಿತಿ ಲಭಿಸಿತ್ತು. ಆತನ ಬಳಿಯಿದ್ದ ಮೊಬೈಲ್ ಲೊಕೇಶನ್ ಆಧರಿಸಿ ಮಂಜೇಶ್ವರ ಪೊಲೀಸರು ಬೆನ್ನು ಹತ್ತಿದ್ದರು. ಮೂರು ಬಸ್ ಗಳನ್ನು ಬದಲಿಸಿ ಹೋಗಿದ್ದು ಕುಂದಾಪುರದಲ್ಲಿ ಇಳಿದು ಸ್ನಾನ ಮಾಡಿ ಮದ್ಯದ ಬಾಟಲಿ ಒಂದನ್ನು ಖರೀದಿಸಿದ್ದಾನೆ. ಅಲ್ಲಿಂದ ಆಟೋ ಒಂದರಲ್ಲಿ ಕುಂದಾಪುರ ಹೊರವಲಯದ ಕೋರೆ ಬಳಿಗೆ ತೆರಳಿದ್ದ. ಪೊಲೀಸರು ಆಟೋ ಚಾಲಕನ ಬಳಿ ಮಾಹಿತಿ ಕೇಳಿದಾಗ, ಎಲ್ಲಿ ತಾನು ಬಿಟ್ಟಿದ್ದೇನೆ ಎನ್ನುವ ಸ್ಥಳ ತೋರಿಸಿದ್ದ. ಅಲ್ಲಿಯೇ ಪರಿಸರದಲ್ಲಿ ಆರೋಪಿ ಮೆಲ್ವಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಹಿಲ್ದಾ ಅವರು ಪುತ್ರ ಮೆಲ್ವಿನ್ ಮೊಂತೆರೋ ಜೊತೆಗೆ ನಲ್ಲೆಂಗಿಯಲ್ಲಿ ವಾಸವಿದ್ದರು. ಇನ್ನೊಬ್ಬ ಪುತ್ರ ಆಲ್ವಿನ್ ಮೊಂತೇರೊ ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ಇವರ ತಂದೆ ಲೂಯಿಸ್ ಮೊಂತೇರೋ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ಹಿಲ್ದಾರನ್ನು ಮೆಲ್ವಿನ್ ಹೊಡೆದು ಕೊಲೆಗೈದಿದ್ದು ಮೃತದೇಹವನ್ನು ಮನೆಯ ಹಿಂಬದಿ 50 ಮೀಟ‌ರ್ ದೂರಕ್ಕೆ ಒಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಮೆಲ್ವಿನ್, ಮಾದಕ ವ್ಯಸನಿಯಾಗಿದ್ದ. ಆದರೆ ಅದೇ ನಶೆಯಲ್ಲಿ ಕೊಂದಿದ್ದಾನೆಯೇ ಅಥವಾ ಬೇರಾವುದೇ ಕಾರಣ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *