
BIG breaking news
ಪುತ್ತಿಲ ಪರಿವಾರ – ಬಿಜೆಪಿ ವಿಲೀನಕ್ಕೆ ಕೂಡಿ ಬಂದ ಮುಹೂರ್ತ – ಅರುಣ್ ಪುತ್ತಿಲರಿಗೆ ಗೌರವಯುತ ಹುದ್ದೆ ನೀಡಲು ರಾಜ್ಯ ಹೈಕಮಾಂಡ್ ಗ್ರೀನ್ ಸಿಗ್ನಲ್ ?
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪುತ್ತೂರಿನಲ್ಲಿ ಕಗ್ಗಂಟಾಗಿ ಪರಿಣಮಿಸಿದ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ವಿಚಾರ ಬಹುತೇಕ ಸುಖ್ಯಾಂತಗೊಳ್ಳುವತ್ತ ಸಾಗಿದೆ . ರಾಜ್ಯ ಹೈಕಮಾಂಡ್ ಅರುಣ್ ಪುತ್ತಿಲರಿಗೆ ಗೌರವಯುತ ಹುದ್ದೆ ನೀಡಲು ನಿರ್ಧರಿಸಿದೆ ಹಾಗೂ ಈ ಕುರಿತ ಮಾಹಿತಿಯನ್ನು ಅರುಣ್ ಪುತ್ತಿಲರವರಿಗೆ ರವಾನಿಸಿದೆ ಎಂಬ ಸ್ಪೋಟಕ ಮಾಹಿತಿ ಲಭಿಸಿದೆ.
ರಾಜ್ಯ ಬಿಜೆಪಿಯ ವರಿಷ್ಠರಾದ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ , ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಈ ಕುರಿತು ಅರುಣ್ ಪುತ್ತಿಲ ಜತೆ ಮಾತನಾಡಿದ್ದು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ. ಪಕ್ಷದ ಹಿರಿಯರ ಮಾತಿಗೆ ಅರುಣ್ ಪುತ್ತಿಲ ಸಮ್ಮತಿ ಸೂಚಿಸಿರುವುದಾಗಿ ಪುತ್ತಿಲ ಪರಿವಾರದ ಉನ್ನತ ಮೂಲಗಳು ಖಚಿತ ಪಡಿಸಿವೆ.
ಈ ಕುರಿತು ದೂರವಾಣಿ ಮೂಲಕ ವರದಿಗಾರರ ಜತೆ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತರವರು “ ಪುತ್ತಿಲ ಪರಿವಾರ ಹಾಗೂ ಬಿಜೆಪಿಗೆ ಸೇರಿದ ಎಲ್ಲರಿಗೂ ಇಂದಿನ ಬೆಳವಣಿಗೆ ಖುಷಿ ಸಂದಿದೆ. ನಾವು ಹಿಂದೆಯೂ ಬಿಜೆಪಿಯೇ ಆಗಿ ಇದ್ದೇವು . ಮುಂದಿನ ಕೆಲ ದಿನಗಳಲ್ಲಿ ನಾವು ಇನ್ನಷ್ಟು ಸಕ್ರಿಯವಾಗಿ ಬಿಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುವ ವಾತವಾರಣ ನಿರ್ಮಾಣವಾಗಲಿದೆ. . ಸದ್ಯದಲ್ಲೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್ ಪುತ್ತಿಲ ಬೇಟಿಯಾಗಲಿದ್ದಾರೆ.
ಪಕ್ಷ ಸೇರ್ಪಡೆ ಯಾವಗ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು “ ನಾವು ಬಿಜೆಪಿಯೇ … ಹಾಗಾಗಿ ನಾವು ಮತ್ತೆ ಸೇರ್ಪಡೆಯಾಗುವ ಅಗತ್ಯವಿಲ್ಲ . ಪುತ್ತಿಲ ಪರಿವಾರವನ್ನು ವಿಲೀನಗೊಳಿಸುವುದಷ್ಟೆ ಬಾಕಿ ಇರುವುದು” ಎಂದರು. ಮುಂದುವರಿದು “ ಇಂತಹದೊಂದು ಸುಸಂದರ್ಭ ಕೂಡಿ ಬರಲು ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ , ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ
ಈ ಕುರಿತ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.


