
ಮಂಗಳೂರು : ಒಡಿಶಾದಿಂದ ಮಂಗಳೂರು ಮತ್ತು ಕೇರಳಕ್ಕೆ ಭಾರೀ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಇಬ್ಬರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 120 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ವಯನಾಡ್ ಮೂಲದ ಅನುಪ್ ಎಂಎಸ್ (28) ಮತ್ತು ಕಣ್ಣೂರಿನ ಲತೀಫ್ ಕೆ ವಿ (36) ಬಂಧಿತರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮಸುಂದರ್ ನೇತೃತ್ವದ ತಂಡ ತಲಪಾಡಿಯ ಪಿಲಿಕೂರಿನಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಇವರಿಂದ ವಶಪಡಿಸಿಕೊಂಡ ಗಾಂಜಾ ಮೌಲ್ಯ 28 ಲಕ್ಷ ರೂ. ಇವರಿಂದ ಗಾಂಜಾ ಹೊರತುಪಡಿಸಿ ಮೂರು ಮೊಬೈಲ್ ಫೋನ್, 4,020 ರೂಪಾಯಿ ನಗದು ಹಾಗೂ ಜೀಪ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಲುಗಳ ಒಟ್ಟು ಮೌಲ್ಯ 35,14,520 ರೂ.
ಆರೋಪಿಗಳು ಒಡಿಶಾದಿಂದ ಆಂಧ್ರಪ್ರದೇಶ ಮತ್ತು ಬೆಂಗಳೂರು ಮಾರ್ಗವಾಗಿ ಗಾಂಜಾವನ್ನು ಕಳ್ಳಸಾಗಣೆ ಮಾಡುತ್ತಿದ್ದು, ಗಾಂಜಾ ಸಾಗಿಸಲು ತಮ್ಮ ಬೊಲೆರೋ ವಾಹನದಲ್ಲಿ ಕಬ್ಬಿಣದ ಪೆಟ್ಟಿಗೆಯನ್ನು ಹೊಂದಿದ್ದರು. ಈ ಅಕ್ರಮದ ಹಿಂದೆ ಇನ್ನಷ್ಟು ಮಂದಿ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.


