
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ವಾಹನ ಮತ್ತು ಕಲ್ಲುಗಳನ್ನು ಜಪ್ತಿ ಮಾಡಿದ್ದಾರೆ.
ಕಾರ್ಕಳ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ| ಹರ್ಷ ಪ್ರಿಯಂವದಾ ಅವರ ನಿರ್ದೇಶನದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಶನಿವಾರ ಬೆಳಗ್ಗೆ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ, ಶಂಕರಬೆಟ್ಟು ಎಂಬಲ್ಲಿ ಅಕ್ರಮವಾಗಿ ಕಲ್ಲು ಕಳವು ಮತ್ತು ಸಾಗಾಟ ಮಾಡುತ್ತಿದ್ದ ಜಾಲ ಭೇದಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಜಿ. ಆರ್. ಅವರು ತಮ್ಮ ಸಿಬಂದಿಯೊಂದಿಗೆ ದಾಳಿ ನಡೆಸಿದಾಗ, ಸರಕಾರಿ ಪಾದೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೆಲವು ಮಂದಿ ಸೇರಿಕೋಂಡು ಕಲ್ಲುಗಳನ್ನು ಲೋಡ್ ಮಾಡುತ್ತಿದ್ದರು. ಟಿಪ್ಪರ್ ಮತ್ತು ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಕಲ್ಲುಗಳನ್ನು ತುಂಬಲಾಗಿತ್ತು.
ಟಿಪ್ಪರ್ ಚಾಲಕ ಮಹಮ್ಮದ್ ರಫೀಕ್ (38) ಹಾಗೂ ಗೂಡ್ಸ್ ವಾಹನದ ಚಾಲಕ ಮಣಿಕಂಠ (34) ನನ್ನು ಈ ವೇಳೆ ಪೊಲೀಸರು ವಿಚಾರಿಸಿದಾಗ, ಪ್ರಕಾಶ್ ಮತ್ತು ಸತೀಶ್ ಎಂಬ ಮಾಲಕರ ಸೂಚನೆಯಂತೆ ಕಲ್ಲು ತುಂಬುತ್ತಿರುವುದಾಗಿ ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಮಣಿಕಂಠ, ತಿಮ್ಮರಾಯ, ಬಾಬು ಮತ್ತು ಸುರೇಶ ಎಂಬುವವರು ಕಲ್ಲುಗಳನ್ನು ತೆಗೆಯುತ್ತಿದ್ದರು. ಕಲ್ಲು ತೆಗೆಯಲು ಬಳಸುತ್ತಿದ್ದ 2 ದೊಡ್ಡ ಸುತ್ತಿಗೆ, 1 ಸಣ್ಣ ಸುತ್ತಿಗೆ ಮತ್ತು 3 ಕಬ್ಬಿಣದ ಚಾಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಕಲ್ಲು ಸಾಗಾಟ ಮಾಡುತ್ತಿದ್ದ 3 ಲಕ್ಷ ರೂ. ಮೌಲ್ಯದ ಟಿಪ್ಪರ್ ಆರು ಸಾವಿರ ಮೌಲ್ಯದ ಕಲ್ಲು, 1.60 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


