ಪುತ್ತೂರು: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯಾರು ಕಾರಣಕರ್ತರಾಗಿದ್ದಾರೋ ಅವರಿಗೆ ಶಿಕ್ಷೆ ಆಗಬೇಕೆಂದು ಮೊದಲಿನಿಂದಲೂ ವಿಶ್ವ ಹಿಂದೂ ಪರಿಷತ್ ಹೋರಾಟ ಮಾಡಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಹೆಣ್ಣು ಮಗಳಿಗೆ ತೊಂದರೆಯಾದಾಗ, ದೌರ್ಜನ್ಯ ಆದಾಗ ಅದನ್ನ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಹೋರಾಟಕ್ಕೂ ಇಳಿಯುತ್ತದೆ. ಸಂತ್ರಸ್ತರು ಯಾರು ಇದ್ದಾರೋ ಅವರ ಪರವಾಗಿ ನಿಂತಿದ್ದೇವೆ. ಆದ್ರೆ ನಮ್ಮ ಧರ್ಮವನ್ನ ಯಾರು ಟೂಲ್ ಕಿಟ್ ಆಗಿ ಬಳಸಿಕೊಳ್ಳುತ್ತಾರೋ ಅಂತಹವರ ವಿರುದ್ಧ ವಿಶ್ವ ಹಿಂದೂ ಪರಿಷತ್ ಪರಿಷತ್ ಹೋರಾಟ ಮಾಡಲಿದೆ. ಯಾಕಂದ್ರೆ ವಿಎಚ್ ಪಿ ಸೌಜನ್ಯಕ್ಕಾದ ಅನ್ಯಾಯಕ್ಕೆ ನ್ಯಾಯ ದೊರಕಲೇಬೇಕು ಆಗ್ರಹಿಸುತ್ತದೆ. ಆದ್ರೆ ಆ ವಿಚಾರವನ್ನೇ ಒಬ್ಬ ಅನ್ಯಮತೀಯ ಬಳಸಿಕೊಂಡು ಸಮಸ್ತ ಹಿಂದೂ ಧರ್ಮಕ್ಕೆ ಹಾಗೂ ಇತಿಹಾಸ ಇರುವ ಧಾರ್ಮಿಕ ಕೇಂದ್ರಕ್ಕೆ ಅವಹೇಳನ ಮಾಡುವುದು ಸರಿಯಲ್ಲ. ಇದನ್ನ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಈಗಾಗ್ಲೇ ಸರ್ಕಾರದ ಸುಪರ್ದಿಯಲ್ಲಿರುವ ಹಿಂದೂ ದೇವಾಲಯಗಳನ್ನ ಹೊರತಂದು ಹಿಂದೂ ಧರ್ಮದವರಿಗೆ ಆಡಳಿತ ಮಾಡಲು ಅವಕಾಶ ಮಾಡುವ ನಿಲುವನ್ನ ವಿಶ್ವ ಹಿಂದೂ ಪರಿಷತ್ ಹೊಂದಿದೆ. ಅದಕ್ಕಾಗಿ ಆಂದೋಲನದ ರೂಪದಲ್ಲಿ ವಿಶ್ವ ಹಿಂದೂ ಪರಿಷತ್ ಹೆಜ್ಜೆಯನ್ನಿಡುತ್ತಿದೆ. ಈ ಬಗ್ಗೆ ರೂಪುರೇಷೆಗಳು ಆಗ್ತಾ ಇವೆ. ಯಾವತ್ತಿಗೂ ಮುಂದಿನ ದಿನಗಳಲ್ಲಿ ಸರ್ಕಾರದ ಹಿಡಿತಕ್ಕೆ ದೇವಸ್ಥಾನಗಳು ಸೇರಬಾರದು. ಅದರ ಬದಲಾಗಿ ಹಿಂದೂಗಳ ದೇವಸ್ಥಾನ ಹಿಂದೂ ಧರ್ಮದವರಿಗೆ ಆಡಳಿತ ಮಾಡುವಂತಾಗಬೇಕು. ಈ ಬಗ್ಗೆ ಸರ್ಕಾರದ ಗಮನಸೆಳೆಯಲು ವಿಶ್ವ ಹಿಂದೂ ಪರಿಷತ್ ಮುಖಂಡರು ಮಾತುಕತೆಗಳನ್ನ ಮಾಡುತ್ತಿದ್ದಾರೆ ಎಂದು ಹೇಳಿದ್ರು.


