
ರೌಡಿಯೊಬ್ಬನನ್ನು ವಶಕ್ಕೆ ಪಡೆಯಲು ಮುಂದಾದ ಮಂಗಳೂರು ಸಿಸಿಬಿ ಪೊಲೀಸರ ಮೇಲೆ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ ಘಟನೆ ಕೇರಳ ಗಡಿಭಾಗ ತಲಪಾಡಿಯಲ್ಲಿ ನಡೆದಿದೆ.
ಮಂಗಳೂರು, ನ.23: ರೌಡಿಯೊಬ್ಬನನ್ನು ವಶಕ್ಕೆ ಪಡೆಯಲು ಮುಂದಾದ ಮಂಗಳೂರು ಸಿಸಿಬಿ ಪೊಲೀಸರ ಮೇಲೆ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ ಘಟನೆ ಕೇರಳ ಗಡಿಭಾಗ ತಲಪಾಡಿಯಲ್ಲಿ ನಡೆದಿದೆ.
ಉಳ್ಳಾಲದ ನಟೋರಿಯಸ್ ರೌಡಿ ದಾವೂದ್ ಸಿಸಿಬಿ ಪೊಲೀಸರ ಮೇಲೆ ದಾಳಿ ನಡೆಸಿದವನಾಗಿದ್ದು ಪೊಲೀಸರು ಆತನನ್ನು ಹೆಡೆಮುರಿ ಕಟ್ಟಿದ್ದಾರೆ. ಕೇರಳ ಗಡಿಭಾಗ ತಲಪಾಡಿ ದೇವಿಪುರ ಎಂಬಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಮತ್ತೊಂದು ತಂಡದ ಮೇಲೆ ದಾವೂದ್ ಸಂಚು ನಡೆಸುತ್ತಿದ್ದಾನೆ ಎಂಬ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ವೇಳೆ, ಮಚ್ಚಿನಿಂದ ದಾಳಿ ನಡೆಸಿದ್ದು ಘಟನೆಯಲ್ಲಿ ಸಿಸಿಬಿ ಎಸ್ಐ ನರೇಂದ್ರ ಮತ್ತು ಇನ್ಬೊಬ್ಬ ಎಎಸ್ಐಗೆ ಗಾಯವಾಗಿದೆ.
ದಾವೂದ್ ಟಾರ್ಗೆಟ್ ಗ್ಯಾಂಗ್ ಲೀಡರ್ ಇಲಿಯಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಲ್ಲದೆ, ಉಳ್ಳಾಲದಲ್ಲಿ ಹಲವು ಕೊಲೆ, ಕೊಲೆಯತ್ನ, ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. 20 ವರ್ಷಗಳ ಹಿಂದೆಯೇ ನರಸಿಂಹ ಶೆಟ್ಟಿಗಾರ್ ಎಂಬ ಹಿಂದು ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ದಾವೂದ್ ಆರೋಪಿಯಾಗಿದ್ದ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದಾವೂದ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಎಸ್ಐ ನರೇಂದ್ರ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ದಾವೂದ್ ಆಪ್ತ ಸಮೀರ್ ಎಂಬಾತನನ್ನು ಕಲ್ಲಾಪಿನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ಸಮೀರ್ ಕೊಲೆಯಾಗಿತ್ತಾದರೂ, ತನಿಖೆಯಲ್ಲಿ ಉಲ್ಲೇಖ ಆಗಿರಲಿಲ್ಲ. ಹಳೆಯ ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತೀಕಾರ ಎಂದು ಹೇಳಿ ಪೊಲೀಸರು ಕೈಚೆಲ್ಲಿದ್ದರು. ಅಂದಿನ ಪ್ರಕರಣದ ಪಿನ್ ಟು ಪಿನ್ ಮಾಹಿತಿ ದಾವೂದ್ ಗೂ ಗೊತ್ತಿತ್ತು. ಸಮೀರ್ ಕಾರಿನಲ್ಲಿ ಬರುತ್ತಿದ್ದಾಗ ದಾವೂದ್ ನದ್ದೇ ಕೊನೆಯ ಕರೆ ಬಂದಿತ್ತು. ಹಿಂದಿನಿಂದ ಬರುತ್ತಿರೋದಾಗಿ ಹೇಳಿದ್ದರಿಂದ ಸಮೀರ್ ಅಲ್ಲಿ ತನ್ನ ಕಾರು ನಿಲ್ಲಿಸಿದ್ದ. ಆದರೆ ಕಾರಿನಿಂದ ಇಳಿಯುತ್ತಲೇ ಅಲ್ಲಿಯೇ ಇದ್ದ ಆಗಂತುಕರು ತಲವಾರು ಬೀಸಿ ಸಮೀರ್ ಕೊಲೆ ಮಾಡಿದ್ದರು.


