ಬಾಂಗ್ಲಾ ಹಿಂದುಗಳ ರಕ್ಷಣೆಗೆ-ವಿಎಚ್‍ಪಿ ಆಗ್ರಹ

ಬಾಂಗ್ಲಾ ಹಿಂದುಗಳ ರಕ್ಷಣೆಗೆ-ವಿಎಚ್‍ಪಿ ಆಗ್ರಹ
ಪುತ್ತೂರು; ನಮ್ಮ ದೇಶದ ನೆರೆಯ ಬಾಂಗ್ಲಾದೇಶದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ. ಪ್ರಸ್ತುತ ಬಾಂಗ್ಲಾದೇಶ ತೀವ್ರ ಹಿಂಸಾಚಾರದಿಂದ ನರಳುತ್ತಿದೆ. ಇದರಲ್ಲಿ ಹಿಂದೂ ಧಾರ್ಮಿಕ ಸ್ಥಳಗಳು, ಹಿಂದೂ ವ್ಯಾಪಾರ ಸಂಸ್ಥೆಗಳು, ಹಿಂದುಗಳ ಮನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಮುಂದಾಗುವಂತೆ ವಿಶ್ವಹಿಂದು ಪರಿಷತ್ ವಿಶ್ವ ಸಮುದಾಯವನ್ನು ಆಗ್ರಹಿಸಿದೆ.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಜಿಲ್ಲಾ ವಿಎಚ್‍ಪಿ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಈಗಾಗಲೇ ನೂರಾರು ಹಿಂದೂ ದೇವಳಗಳನ್ನು ನಾಶ ಮಾಡಲಾಗಿದೆ. ಪ್ರಸ್ತುತ ಬಾಂಗ್ಲಾ ದಲ್ಲಿ ಶೇ.8ರಷ್ಟಿರುವ ಹಿಂದೂ ಸಮುದಾಯ ನಿರಂತರವಾಗಿ ಜಿಹಾದಿಗಳ ಕಿರುಕುಳಕ್ಕೆ ಬಲಿಯಾಗುತ್ತಿದೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ, ಅಲ್ಲಿನ ತೀವ್ರಗಾಮಿ ಜಹಾವಿ ಶಕ್ತಿಗಳು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿವೆ. ಬಾಂಗ್ಲಾದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಹಿಂದೂ ಧಾರ್ಮಿಕ ಸ್ಥಳಗಳು, ಹಿಂದೂ ವ್ಯಾಪಾರ ಸಂಸ್ಥೆಗಳು ಮತ್ತು ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ. ಬಾಂಗ್ಲಾದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಹಿಂದೂ ರುದ್ರಭೂಮಿಗಳನ್ನು ನಾಶಮಾಡಲಾಗುತ್ತಿದೆ. ಅವರ ಹಿಂಸಾಚಾರ ಮತ್ತು ಭಯೋತ್ಪಾದನೆಯ ಗುರಿಯಾಗದ ಯಾವುದೇ ಜಿಲ್ಲೆ ಬಾಂಗ್ಲಾದೇಶದಲ್ಲಿ ಉಳಿದಿಲ್ಲ. ಮನೆಗಳು,ಮಠಗಳು.ಅಂಗಡಿಗಳು, ಕಚೇರಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಮಹಿಳೆಯರು, ಮಕ್ಕಳು ಮತ್ತು ಅವರ ನಂಬಿಕೆ ಮತ್ತು ಶ್ರದ್ಧಾ ಕೇಂದ್ರಗಳು ಬಾಂಗ್ಲಾದೇಶದಲ್ಲಿ ಸುರಕ್ಷಿತವಾಗಿಲ್ಲ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ತುಂಬಾ ಹದಗೆಡುತ್ತಿದೆ. ಇದು ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಗಾಗಿ ಮತ್ತು ಅವರ ಮಾನವ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿಯಾಗಿದೆ. ಭಾರತವು ಸಾಂಪ್ರದಾಯಿಕವಾಗಿ ಪ್ರಪಂಚದಾದ್ಯಂತ ಕಿರುಕುಳಕ್ಕೊಳಗಾದ ವಲಸಿಗರಿಗೆ ಸಹಾಯ ಮಾಡಿಕೊಂಡು ಬಂದಿರುವಂತೆ ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಭಾರತ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ವಿಎಚ್‍ಪಿ ಕಾರ್ಯದರ್ಶಿ ನವೀನ್ ನರಿಯ, ಕೋಶಾಧಿಕಾರಿ ಮಾಧವ ಪೂಜಾರಿ, ಸಂಘಟನಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು

News Editor

Learn More →

Leave a Reply

Your email address will not be published. Required fields are marked *