ಮಣಿಪಾಲ: ಕೆಫೆ ಮೇಲೆ ಪೊಲೀಸ್ ದಾಳಿ..! ನಿಷೇಧಿತ ಹುಕ್ಕಾ ಸೇವಿಸಿದ 8 ಮಂದಿ ವಿರುದ್ಧ FIR

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನನಗರದಲ್ಲಿರುವ ಐರಿಸ್ ಪ್ಲಾಜಾ ಕಟ್ಟಡದ ಮೊದಲ ಮಹಡಿಯಲ್ಲಿರುವ ಡಾರ್ಕ್ ಲ್ಯಾಬ್ ಕೆಫೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ, ನಿಷೇಧಿತ ಹುಕ್ಕಾ ಸೇವನೆ ಮಾಡುತ್ತಿದ್ದ 8 ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಿಷೇಧಿತ ಹುಕ್ಕಾ ಸೇವನೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಆಗಸ್ಟ್‌ 6ರಂದು ರಾತ್ರಿ ಸುಮಾರು 9.35ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಕೆಫೆಯ ಎರಡು ಪ್ರತ್ಯೇಕ ಕ್ಯಾಬಿನ್‌ಗಳಲ್ಲಿ ಯುವಕರು ಹುಕ್ಕಾ ಸೇವಿಸುತ್ತಿರುವುದು ಪತ್ತೆಯಾಯಿತು. ದಾಳಿಯ ವೇಳೆ ಮೂರು ಹುಕ್ಕಾ ಸೆಟ್‌ಗಳು, ತಂಬಾಕು ಮಿಶ್ರಿತ ಹುಕ್ಕಾ ಫ್ಲೇವರ್ ಪ್ಯಾಕ್‌ಗಳು ಸೇರಿದಂತೆ ಸುಮಾರು ₹4 ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹುಕ್ಕಾ ಸೇವನೆಗಾಗಿ ಕೆಲವರು ಆನ್‌ಲೈನ್ ಮೂಲಕ ಹಣ ಪಾವತಿಸಿರುವ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ನಿರ್ದೇಶನದಂತೆ ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಎಸ್‌ಐ ವಾಮನ ಹಾಗೂ ಸಿಬ್ಬಂದಿ ಸುರೇಶ್ ಶೆಟ್ಟಿ, ಚೇತನ್, ರವಿರಾಜ್ ಮತ್ತು ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಅಕ್ರಮ ಹುಕ್ಕಾ ಸೇವನೆ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *