
ಕುಮಾರಧಾರ ನದಿಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮೇ 7 ರಂದು ಬೇಧಿಸಿದ್ದಾರೆ. ಜಿಲ್ಲೆಯ ಪ್ರತಿಷ್ಟಿತ ಜನ ಪ್ರತಿನಿಧಿಯೊಬ್ಬರ ಕೃಪಕಟಾಕ್ಷದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ನೇತೃತ್ವದಲ್ಲಿ ಕಡಬದ ಕುದ್ಮಾರಿನಲ್ಲಿ ಈ ಬೃಹತ್ ಮರಳು ದಂಧೆ (Sand Mafia) ಕಳೆದ ಹಲವಾರು ಸಮಯದಿಂದ ಎಗ್ಗಿಲ್ಲದೆ ನಡೆಯುತಿತ್ತು. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಪುತ್ತೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಹಾಗೂ . ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಎಂಬಾತನೂ ಅಕ್ರಮ ಮರಳುಗಾರಿಕೆಗೆ ಸಹಕಾರ ನೀಡಿದ್ದು ಆತನ ವಿರುದ್ದವೂ ಹಲವು ಪ್ರಕರಣಗಳು ದಾಖಲಾಗಿವೆ. ಇವರಿಬ್ಬರ ವಿರುದ್ದ ಒಟ್ಟು 6 ಪ್ರಕರಣಗಳು ದಾಖಲಾಗಿರುವುದಾಗಿ ಜಿಲ್ಲಾ ಪೊಲೀಸ್ ತಿಳಿಸಿದ್ದಾರೆ.
ಬುಧವಾರ ತಡ ರಾತ್ರಿ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಹಲವಾರು ಟಿಪ್ಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ದಾಳಿಯ ವೇಳೆ ಮರಳು ರ್ಯಾಂಪ್ ನಲ್ಲಿ 10ಕ್ಕೂ ಹೆಚ್ಚು ಟಿಪ್ಪರ್ ಗಳು ಮರಳು ಸಾಗಿಸಲು ಅಲ್ಲಿ ಬಂದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆದರೆ ಪೊಲೀಸರಿಗೆ ಮರಳು ತುಂಬಿದ್ದ 5 ರಿಂದ 6 ಲಾರಿಗಳು ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ವೇಳೆ ಲಕ್ಷಾಂತರ ಮೌಲ್ಯದ ಮರಳು ಹಾಗೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಣೆಕಟ್ಟಿಗೆ ಕನ್ನ ಕೊರೆದು ಜಲಾಶಯದ ನೀರು ಬರಿದು ಮಾಡಿದ ದಂಧೆಕೋರರು ಜೆಸಿಬಿ ಮೂಲಕ ಕುಮಾರಧಾರ ನದಿಯಿಂದ ಮರಳನ್ನು ತೆಗೆಯುವ ಮರಳು ದಂಧೆಕೋರರು, ಅದನ್ನು ಸ್ವಚ್ಚಗೊಳಿಸಲು ಬೇಕಾದ ನೀರಿಗೆ ಪಕ್ಕದಲ್ಲಿರುವ ಶಾಂತಿಮೊಗರು ಕಿಂಡಿ ಅಣೆಕಟ್ಟಿಗೆ ಕನ್ನ ಕೊರೆಯುತ್ತಾರೆ ಎಂಬ ಗಂಭೀರ ಆರೋಪ ಹಾಗೂ ಅದಕ್ಕೆ ಪುಷ್ಟಿ ನೀಡುವ ವಿಡಿಯೋ ಸಾಕ್ಷಿಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲವು ದಿನಗಳಿಂದ ಶಾಂತಿಮೊಗರು ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದಾರೆ.
ಶಾಂತಿಮೊಗರು ಕಿಂಡಿ ಅಣೆಕಟ್ಟಿನ ಮೇಲ್ಬಾಗದಲ್ಲಿ ಹಾಗೂ ಅಣೆಕಟ್ಟಿನ ಕೆಳಭಾಗದಲ್ಲಿ ತಲಾ ಒಂದು ಮರಳು ಅಡ್ಡೆ ಕಾರ್ಯಾಚರಿಸುತ್ತಿದ್ದಾರೆ. ಮೇಲ್ಭಾಗದವರು ಅಣೆಕಟ್ಟಿನಲ್ಲಿ ನೀರು ನಿಂತರೆ ಮರಳು ತೆಗೆಯಲು ಅಡ್ಡಿಯಾಗುತ್ತದೆ ಎಂದು ಆಣೆಕಟ್ಟಿಗೆ ಕನ್ನ ಕೊರೆದು ನೀರು ಸೋರಿ ಹೋಗುವಂತೆ ಮಾಡುತ್ತಿದ್ದಾರೆ. ಕೆಲ ಭಾಗದವರು ಮಣ್ಣನ್ನು ಮರಳಿನಿಂದ ಸೇರ್ಪಡೆಗೊಳಿಸಲು ಬೇಕಾದ ಅಗಾಧ ನೀರಿಗಾಗಿ ಆಣೆಕಟ್ಟಗೆ ತೂತು ಕೊರೆಯುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.ಇದರಿಂದ ಅಣೆಕಟ್ಟಿನ ನೀರು ಸಂಪೂರ್ಣವಾಗಿ ಬರಿದಾಗಿದ್ದು ಕೃಷಿಕರು ನೀರಿಲ್ಲದೇ ಪರದಾಡುವಂತೆ ಆಗಿದೆ.


