ಯದುವೀರ್ ಕಾಂಗ್ರೆಸ್ ನಿಂದ ಸ್ಪರ್ಧಿಸುವಂತೆ ಸಿಎಂ ಮತ್ತು ಡಿಸಿಎಂ ನೀಡಿದ ಆಹ್ವಾನ ನಿರಾಕರಿಸಿದ್ದರು

ಮಡಿಕೇರಿ: ’ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಆಹ್ವಾನವನ್ನೂ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನಿರಾಕರಿಸಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈವಿಜಯೇಂದ್ರ ಹೇಳಿದರು.

ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಬಿಜೆಪಿ ಯದುವೀರ್ ಅವರಿಗೆ ಟಿಕೆಟ್ ಘೋಷಿಸುವ ಮುನ್ನಾ ದಿನ ದೂರವಾಣಿ ಕರೆ ಮಾಡಿದ್ದ ಸಿಎಂ ಮತ್ತು ಡಿಸಿಎಂ, ರಾಜಕಾರಣದಲ್ಲಿ ಆಸಕ್ತಿ ಇದ್ದರೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡುವುದಾಗಿ ಹೇಳಿದ್ದರು. ಅವರಿಗೆ ‌ಪ್ರತಿಕ್ರಿಯಿಸಿದ್ದ ಯದುವೀರ್, ರಾಜಕಾರಣದಲ್ಲಿ ಆಸಕ್ತಿ ಇದೆ ಎಂದು ಸ್ಪರ್ಧಿಸುತ್ತಿಲ್ಲ. ನರೇಂದ್ರ ಮೋದಿ ಅವರ ಅಪೇಕ್ಷೆಯ ಮೇರೆಗೆ ದೇಶದ ಸೇವೆಗೆ ಬರುತ್ತಿದ್ದೇನೆ ಎಂದಿದ್ದರು’ ಎಂದು ವಿಜಯೇಂದ್ರ ತಿಳಿಸಿದರು.

ಯದುವೀರ್ ಮಾತನಾಡಿ, ‘ಮೋದಿ ಅವರ ಅಪೇಕ್ಷೆಯಂತೆ ಅಭ್ಯರ್ಥಿಯಾಗಿದ್ದೇನೆ. ನಮ್ಮ ಪೂರ್ವಿಕರ ಆಡಳಿತವು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಸುವರ್ಣಯುಗ ಎನಿಸಿತ್ತು. ಹಾಗೆಯೇ, ನರೇಂದ್ರ ಮೋದಿ ಅವರ ಆಡಳಿತವೂ ಈಗ ಸುವರ್ಣಯುಗ ಎನಿಸಿದೆ’ ಎಂದರು.

ಹಾಲಿ ಸಂಸದ ಪ್ರತಾಪಸಿಂಹ ಅವರಿಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆ. ನಾನು ಅಧ್ಯಕ್ಷನಾಗಿರುವವರೆಗೂ ಅವರ ಭವಿಷ್ಯದ ಕುರಿತು ಚಿಂತನೆ ಮಾಡುತ್ತೇನೆ’ ಎಂದು ವಿಜಯೇಂದ್ರ ಭರವಸೆ ನೀಡಿದರು.

ಮೈಸೂರು: ಪ್ರಧಾನಿ ಮೋದಿ ಅಲೆ ಮತ್ತು ಸೋಲಿನ ಭೀತಿಯಿಂದ ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ,  ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸಚಿವರನ್ನ ಕಣಕ್ಕಿಳಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯೋಜನೆಯಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅಲೆಗೆ ಹೆದರಿ  ಸಚಿವರು ಸ್ಪರ್ಧಿಸಲು ಮುಂದೆ ಬರಲೇ ಇಲ್ಲ. 18 ಮಂದಿ ಸಚಿವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದರು. ಆದರೆ, ಸೋಲಿನ ಭೀತಿಯಿಂದ ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ. ಕಡಿಮೆ ಅವಧಿಯಲ್ಲಿ  ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಯಾರ ಪರವಾಗಿಯೂ ಈ ಸರ್ಕಾರವಿಲ್ಲ ಎಂದು ಜನ ಬೇಸತ್ತಿದ್ದಾರೆ. ಜನಪ್ರಿತೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೀಗ ನಮ್ಮ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ  ಹರಿಹಾಯ್ದರು.

News Editor

Learn More →

Leave a Reply

Your email address will not be published. Required fields are marked *