ಉಳ್ಳಾಲ ಪೌರಾಯುಕ್ತ ಸಂತೋಷ್ ವರ್ಗಾವಣೆ..!

ಉಳ್ಳಾಲ: ಉಳ್ಳಾಲ ನಗರಸಭೆಯ ಪೌರಾಯುಕ್ತರಾಗಿದ್ದ ಸಂತೋಷ್ ಅವರನ್ನು ಉಡುಪಿ ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಸುಮಾರು ಆರು–ಏಳು ತಿಂಗಳಿನಿಂದ ಉಳ್ಳಾಲ ನಗರಸಭೆಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ್ದ ಸಂತೋಷ್ ಅವರ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪೂರ್ಣಾವಧಿಯ ಪೌರಾಯುಕ್ತರ ನೇಮಕಕ್ಕೆ ಸ್ಥಳೀಯ ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಯು.ಟಿ. ಖಾದರ್ ಅವರ ಶಿಫಾರಸಿನ ಮೇರೆಗೆ ಸಂತೋಷ್ ಅವರನ್ನು ಉಳ್ಳಾಲಕ್ಕೆ ನೇಮಕ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ನಗರಸಭೆಯ ಆಡಳಿತದಲ್ಲಿ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿ ನಂತರವೇ ಅನುಮೋದನೆ ನೀಡುತ್ತಿದ್ದ ಅವರು, ಟ್ಯಾಂಕರ್ ನೀರು ಸರಬರಾಜು ಟೆಂಡರ್ ಪ್ರಕ್ರಿಯೆಯಲ್ಲಿ ಕೆಲ ಮಾನದಂಡಗಳನ್ನು ಅಳವಡಿಸಿದ ಪರಿಣಾಮ ನಗರಸಭೆಗೆ ಅಂದಾಜು ₹50 ಲಕ್ಷದಷ್ಟು ಉಳಿತಾಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಟ್ಟಡ ಹಾಗೂ ವಾಣಿಜ್ಯ ಪರವಾನಗಿ ಪ್ರಕ್ರಿಯೆಯಲ್ಲಿ ಕಂಡುಬಂದ ಕೆಲವು ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದ ಅವರು, ಕಾಮಗಾರಿಗಳ ಬಿಲ್‌ಗಳನ್ನು ಸ್ಥಳ ಪರಿಶೀಲನೆಯ ಬಳಿಕವೇ ಅನುಮೋದಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದರು ಎನ್ನಲಾಗಿದೆ.

ಅಲ್ಲದೆ, ಪೌರಾಯುಕ್ತರ ಕಚೇರಿಯಲ್ಲಿ ಅನಗತ್ಯ ಭೇಟಿ ಹಾಗೂ ಹರಟೆಗೆ ಅವಕಾಶ ನೀಡದೆ, ಸಾರ್ವಜನಿಕರ ಅಗತ್ಯ ಕೆಲಸಗಳಿಗೆ ಆದ್ಯತೆ ನೀಡಿ ಮುಕ್ತವಾಗಿ ಭೇಟಿ ನೀಡುವ ವ್ಯವಸ್ಥೆ ಕಲ್ಪಿಸಿದ್ದರು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೌರಾಯುಕ್ತ ಸಂತೋಷ್ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು ಅವರ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಳ್ಳಾಲ ನಗರಸಭೆಗೆ ಶೀಘ್ರದಲ್ಲೇ ಸಮರ್ಥ ಹಾಗೂ ಪೂರ್ಣಾವಧಿಯ ಪೌರಾಯುಕ್ತರನ್ನು ನೇಮಕ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *