
ವಾರಣಾಸಿ :
ದೇಶದ ವಿವಿಧ ಭಾಗಗಳನ್ನು ವೇಗವಾಗಿ ಸಂಪರ್ಕಿಸಲು ಉದ್ದೇಶಿಸಿರುವ ನಾಲ್ಕು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಹಸಿರು ನಿಶಾನೆ ತೋರಿಸಿದರು.
ಈ ಹೊಸ ರೈಲುಗಳು ಬನಾರಸ್–ಖಜುರಾಹೊ, ಲಕ್ನೋ–ಸಹಾರನ್ಪುರ, ಫಿರೋಜ್ಪುರ–ದೆಹಲಿ ಮತ್ತು ಎರ್ನಾಕುಲಂ–ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ. ಇವು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದರೊಂದಿಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಪ್ರಾದೇಶಿಕ ಆರ್ಥಿಕತೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಅವರು ರೈಲು ಸೇವೆಗಳ ಪ್ರಾರಂಭದ ಸಂದರ್ಭದಲ್ಲಿ ಮಾತನಾಡಿ, ವಂದೇ ಭಾರತ್, ನಮೋ ಭಾರತ್ ಹಾಗೂ ಅಮೃತ ಭಾರತ್ ರೈಲುಗಳು ಭಾರತೀಯ ರೈಲ್ವೆಯ ಹೊಸ ಪೀಳಿಗೆಯ ಸಂಕೇತವಾಗಿದ್ದು, ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬುನಾದಿಯಾಗಿವೆ ಎಂದರು.
ಪ್ರತಿ ಮಾರ್ಗದ ವೈಶಿಷ್ಟ್ಯಗಳು:
ಬನಾರಸ್–ಖಜುರಾಹೊ ರೈಲು: ಪ್ರಯಾಣಿಕರಿಗೆ ಸುಮಾರು 2 ಗಂಟೆ 40 ನಿಮಿಷ ಸಮಯ ಉಳಿಸಲಿದೆ. ಪ್ರಯಾಗ್ರಾಜ್, ಚಿತ್ರಕೂಟ ಮತ್ತು ಖಜುರಾಹೊ ಮುಂತಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳಿಗೆ ವೇಗವಾದ ಮತ್ತು ಆರಾಮದಾಯಕ ಸಂಪರ್ಕ ಒದಗಿಸುತ್ತದೆ.
ಲಕ್ನೋ–ಸಹಾರನ್ಪುರ ರೈಲು: ಒಟ್ಟು 7 ಗಂಟೆ 45 ನಿಮಿಷದಲ್ಲಿ ಪ್ರಯಾಣ ಪೂರ್ಣಗೊಳಿಸುವ ಈ ರೈಲು, ಸುಮಾರು 1 ಗಂಟೆ ಸಮಯ ಉಳಿಸಲಿದೆ. ಲಕ್ನೋದಿಂದ ಹರಿದ್ವಾರವರೆಗೆ ಸುಗಮ ಸಂಪರ್ಕ ಕಲ್ಪಿಸುತ್ತದೆ.
ಫಿರೋಜ್ಪುರ–ದೆಹಲಿ ರೈಲು: ಕೇವಲ 6 ಗಂಟೆ 40 ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸುವ ಈ ರೈಲು, ಬಟಿಂಡಾ ಮತ್ತು ಪಟಿಯಾಲಾದಂತಹ ಪಂಜಾಬ್ನ ಪ್ರಮುಖ ನಗರಗಳನ್ನು ದೆಹಲಿಯೊಂದಿಗೆ ವೇಗವಾಗಿ ಸಂಪರ್ಕಿಸುತ್ತದೆ. ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಸಹಕಾರಿಯಾಗಿದೆ.
ಎರ್ನಾಕುಲಂ–ಬೆಂಗಳೂರು ರೈಲು: 8 ಗಂಟೆ 40 ನಿಮಿಷದಲ್ಲಿ ಪ್ರಯಾಣ ಪೂರ್ಣಗೊಳಿಸುವ ಈ ರೈಲು, ಇತರೆ ರೈಲಿಗಿಂತ ಸುಮಾರು 2 ಗಂಟೆ ಸಮಯ ಉಳಿಸುತ್ತದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಆರ್ಥಿಕ ಹಾಗೂ ಐಟಿ ಕೇಂದ್ರಗಳ ನಡುವೆ ವೇಗವಾದ ಸಂಪರ್ಕ ಒದಗಿಸುತ್ತದೆ.


