
ಮಂಗಳೂರು: ವಿಚಾರಣಾಧೀನ ಖೈದಿಗಳನ್ನು ನಿಯಂತ್ರಿಸಲು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್ ಈಗ ಕೋರ್ಟ್ಗೂ ತೊಂದರೆ ಉಂಟುಮಾಡುತ್ತಿದೆ. ಜಾಮರ್ನ ಪರಿಣಾಮದಿಂದ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಮೊಬೈಲ್ ಸಿಗ್ನಲ್ ಸಮಸ್ಯೆ ಎದುರಿಸುತ್ತಿದ್ದು, ಮಂಗಳೂರು ವಕೀಲರ ಸಂಘ ಈ ಬಗ್ಗೆ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗಿದೆ.
ಮಂಗಳೂರು ಕಾರಾಗೃಹದ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ವರ್ಕ್ ದುರ್ಬಲವಾಗಿದೆ. ಈ ವ್ಯಾಪ್ತಿಯೊಳಗೆ ಕೋರ್ಟ್, ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ವಕೀಲರ ಸಂಘದ ಕಚೇರಿ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳು ಬರುತ್ತವೆ. ಜಾಮರ್ನ ಪರಿಣಾಮದಿಂದ ಕೋರ್ಟ್ ಕಾರ್ಯಾಚರಣೆ ಹಾಗೂ ವಕೀಲರ ಸಂಘದ ದಿನನಿತ್ಯ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ ಎಂದು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಾರಾಗೃಹದ ಒಳಪ್ರದೇಶದಲ್ಲಿ ಮಾತ್ರ ಜಾಮರ್ ಕಾರ್ಯನಿರ್ವಹಿಸುವಂತಿದ್ದರೆ ಯಾವುದೇ ಅಡಚಣೆ ಇರುವುದಿಲ್ಲ, ಆದರೆ ಸುತ್ತಮುತ್ತಲ ಪ್ರದೇಶದಲ್ಲೂ ಸಿಗ್ನಲ್ ವ್ಯತ್ಯಯ ಉಂಟಾಗುತ್ತಿದೆ ಎಂದು ಸಂಘದ ವಾದ. ಇದರ ಪರಿಣಾಮವಾಗಿ ವಕೀಲರು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ಸಂಪರ್ಕ ವ್ಯತ್ಯಯದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ವಕೀಲರ ಸಂಘದ ವಾದವನ್ನು ಆಲಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ಪೀಠ, ಸರ್ಕಾರದ ವಕೀಲರಿಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ಒಂದು ವಾರದ ಅವಧಿ ನೀಡಿದೆ. ಕಾರಾಗೃಹದೊಳಗೆ ಹಾಗೂ ಕೋರ್ಟ್ ಸುತ್ತಮುತ್ತ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಎಷ್ಟಿದೆ, ಜಾಮರ್ನಿಂದ ನ್ಯಾಯಾಲಯದ ಸಿಗ್ನಲ್ಗಳಿಗೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆಯೇ ಎಂಬುದರ ಕುರಿತು ತಾಂತ್ರಿಕ ವರದಿ ನೀಡುವಂತೆ ನಿರ್ದೇಶಿಸಿದೆ.
ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 18 ರಂದು ನಡೆಯಲಿದೆ.


