
ಕೋಟೆಕಾರ್: ಕೋಟೆಕಾರ್ ಕೊರಗಜ್ಜ ಕಟ್ಟೆ ಇಂದ ಸಂಕೋಳಿ ವರೆಗೆ ಇರುವ ಎರಡೂ ಬದಿಯ ಸರ್ವಿಸ್ ರಸ್ತೆಯ ವಿಭಜಕಗಳನ್ನು ಕೆಲವು ವ್ಯಾಪಾರಸ್ಥರು ತಮ್ಮ ಸ್ವಾರ್ಥದ ನಿಮಿತ್ತ ಅವೈಜ್ಞಾನಿಕವಾಗಿ ತೆಗೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯರ ಪ್ರಕಾರ, ಈ ಅಕ್ರಮ ಕೃತ್ಯದಿಂದ ಜನಸಾಮಾನ್ಯರ ಜೀವಕ್ಕೆ ಅಪಾಯ ಉಂಟಾಗಿದ್ದು, ಅಲ್ಲದೆ ಈ ಮಾರ್ಗದ ಪಕ್ಕದಲ್ಲಿ ಖಾಸಗಿ ಶಾಲೆಗಳಿದ್ದು, ಮಕ್ಕಳು ಪ್ರತಿನಿತ್ಯ ಇದೇ ದಾರಿಯ ಮೂಲಕ ರಸ್ತೆ ದಾಟುವ ಕಾರಣದಿಂದ ಇದು ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿರುವುದಾಗಿ ಅವರು ತಿಳಿಸಿದ್ದಾರೆ.
ವಿಭಜಕ ತೆಗೆದುಹಾಕುವುದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪಾದಚಾರಿಗಳಿಗೆ ರಸ್ತೆ ದಾಟುವುದು ದೊಡ್ಡ ಸವಾಲಾಗಿದೆಯೆಂದು ಸ್ಥಳೀಯರು ಹೇಳಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ದಿನವೂ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಭಜಕಗಳನ್ನು ತೆಗೆದುಹಾಕಿದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ತೆರೆಯಲ್ಪಟ್ಟ ವಿಭಜಕಗಳನ್ನು ತಕ್ಷಣ ಮುಚ್ಚಿ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಅವರು ಸಂಬಂಧಪಟ್ಟ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಡಿಸಿ ಅವರು ವಿಷಯವನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


