ಪ್ರೀತಿ ನಿರಾಕರಣೆ ಕೋಪಕ್ಕೆ ಕಾರಣ: ಯಾಮಿನಿ ಹತ್ಯೆ ಆರೋಪಿಯಿಂದ ವಾಟ್ಸಾಪ್‌ ಗ್ರೂಪ್‌ ಸೃಷ್ಟಿ ಬಹಿರಂಗ

ಬೆಂಗಳೂರು: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಯಾಮಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತ ಆರೋಪಿ ವಿಘ್ನೇಶ್ ವಿರುದ್ಧ ತನಿಖೆ ಮುಂದುವರಿಸುತ್ತಿರುವ ಶ್ರೀರಾಮಪುರ ಪೊಲೀಸರು ಹೊಸ ಸ್ಫೋಟಕ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರ ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ಆರೋಪಿ ವಿಘ್ನೇಶ್ ಜನವರಿಯಲ್ಲಿಯೇ “ಮಿಷನ್ ಯಾಮಿನಿ ಪ್ರಿಯಾ” ಎಂಬ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ್ದಾನೆ. ಯಾಮಿನಿಯ ಚಲನವಲನಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ಗ್ರೂಪ್ ಕ್ರಿಯೆಟ್ ಮಾಡಲಾಗಿತ್ತು.

ಆತನ ಯೋಜನೆ ಭಾಗವಾಗಿ, ಯಾಮಿನಿಯ ನಾಲ್ವರು ಸ್ನೇಹಿತರಿಗೆ “ನಾನು ಸಿಸಿಬಿ ಪೊಲೀಸ್‌, ಯಾಮಿನಿ ನನ್ನ ತಂಗಿ. ಆಕೆಯ ಕಾಲೇಜು ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿ ನೀಡಬೇಕು. ನೀಡದಿದ್ದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಜೀವನ ಹಾಳು ಮಾಡುತ್ತೇನೆ” ಎಂದು ಬೆದರಿಸಿ, ಅವರನ್ನು ಗ್ರೂಪ್‌ನ ಸದಸ್ಯರನ್ನಾಗಿ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬನಶಂಕರಿಯ ಖಾಸಗಿ ಕಾಲೇಜೊಂದರಲ್ಲಿ ಬಿ-ಫಾರ್ಮಾ ವ್ಯಾಸಂಗ ಮಾಡುತ್ತಿದ್ದ ಯಾಮಿನಿಯನ್ನು ಅಕ್ಟೋಬರ್ 16ರಂದು ಕಾಲೇಜು ಮುಗಿಸಿ ಮನೆಗೆ ಹೋಗುವಾಗ ಆರೋಪಿ ಹಿಂಬದಿಯಿಂದ ದಾಳಿ ಮಾಡಿ, ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಘಟನೆ ಬಳಿಕ ಪೊಲೀಸರು ಆರೋಪಿ ವಿಘ್ನೇಶ್‌ರನ್ನು ಬಂಧಿಸಿ, ಅವನ ಮೊಬೈಲ್‌ಫೋನ್‌ನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರಿಟ್ರೀವ್‌ಗೆ ಕಳುಹಿಸಿದ್ದರು. ಇದೀಗ ಬಂದಿರುವ ಎಫ್‌ಎಸ್‌ಎಲ್ ವರದಿಯ ಪ್ರಕಾರ, ವಾಟ್ಸಾಪ್ ಗ್ರೂಪ್‌ನಲ್ಲಿ ಯಾಮಿನಿಯ ಚಲನವಲನಗಳ ಬಗ್ಗೆ ಚರ್ಚೆ ನಡೆದಿದ್ದು, ಆಕೆ ಓಡಾಡಿದ ಸ್ಥಳಗಳ ಫೋಟೋಗಳು ಸಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *