ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರು ಡಂಪಿಂಗ್ ಯಾರ್ಡ್ (ಲ್ಯಾಂಡ್ ಫಿಲ್ ಸೈಟ್)ನ್ನು ಸಂಪೂರ್ಣವಾಗಿ ಝೀರೋ ವೇಸ್ಟ್ ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹಂತ ಹಂತದ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಸೋಮವಾರ ಯಾರ್ಡ್ಗೆ ಭೇಟಿ ನೀಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಾರಂಪರಿಕ ತ್ಯಾಜ್ಯ
ಘಟಕದಲ್ಲಿ 1990ರಿಂದೀಚೆಗೆ ಸಂಗ್ರಹಗೊಂಡ ಸುಮಾರು 36775 ಟನ್ ಹಳೆಯ ತ್ಯಾಜ್ಯ (ಪಾರಂಪರಿಕ) ರಾಶಿಯಿದ್ದು, ಇದನ್ನು ವಿಲೇವಾರಿ ಮಾಡಲು ಮೆಗಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಶನ್ 2.0 ಯೋಜನೆಯಲ್ಲಿ 3 ಕೋಟಿ ರೂ. ಮಂಜೂರಾಗಿದೆ. ಹಳೆ ತ್ಯಾಜ್ಯವನ್ನು ಖಾಲಿ ಮಾಡುವ ಯೋಜನೆ ಆರಂಭಗೊಂಡಿದೆ. ಈಗಾಗಲೇ 3600 ಟನ್ ಹಳೆ ತ್ಯಾಜ್ಯ ಸಂಸ್ಕರಣೆ ಮಾಡಿ 3 ಹಂತದಲ್ಲಿ ಬೇರ್ಪಡಿಸಲಾಗುತ್ತಿದೆ. ಪ್ರಗತಿಯಲ್ಲಿರುವ ಕಾಮಗಾರಿಯನ್ನು ಸಂಸದರು ವೀಕ್ಷಿಸಿದರು. ಮುಂದಿನ ಮಾರ್ಚ್ ವೇಳೆ ಪಾರಂಪರಿಕ ತ್ಯಾಜ್ಯ ಶೂನ್ಯ ಸ್ಥಿತಿಗೆ ಬರಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಯಾರ್ಡ್ನಲ್ಲಿರುವ ಸಿಎನ್ಜಿ ಘಟಕ ಮತ್ತು ಎಂಆರ್ಎಫ್ ಘಟಕಗಳು ಕಾರ್ಯಾರಂಭ ಮಾಡುವ ಮೊದಲೇ ಪಾರಂಪರಿಕ ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಿದ್ದು ಸರಿಯಲ್ಲ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. 2 ಘಟಕಗಳು ಕಾರ್ಯಾರಂಭಗೊಂಡ ಮೇಲೆ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಮಾಡಬೇಕಿತ್ತು. ಈಗಲೇ ಕಾರ್ಯದೇಶ ಕೊಟ್ಟು ಕೆಲಸ ಆರಂಭಗೊಂಡ ಕಾರಣ ನಿತ್ಯವೂ ಬರುತ್ತಿರುವ ತ್ಯಾಜ್ಯವನ್ನು ಯಾವ ಪಟ್ಟಿಗೆ ಸೇರಿಸುತ್ತೀರಿ ಎಂದವರು ಪ್ರಶ್ನಿಸಿದರು.
ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋಟರಿ ಚ್ಯಾರಿಟೇಬಲ್ ಟ್ರಸ್ಟ್(ರಿ.) ಇವರ ಆಶ್ರಯದಲ್ಲಿ ಕೃಷ್ಣ ಮುಳಿಯ ಗ್ರೀನ್ ಎಲ್ಎಲ್ಪಿ ಮತ್ತು ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಗಳು ಜಂಟಿಯಾಗಿ ಯಾರ್ಡ್ನಲ್ಲಿ ಬಯೋಗ್ಯಾಸ್ ಘಟಕ ಸ್ಥಾಪಿಸಿವೆ. ಇಲ್ಲಿಗೆ ಬರುವ ಹಸಿ ಕಸ ಬಳಸಿಕೊಂಡು ಸಿಎನ್ಜಿ (ಬಯೋ ಗ್ಯಾಸ್) ಉತ್ಪಾದಿಸುತ್ತಿವೆ. ಸಂಸದರು ಘಟಕ ಪರಿಶೀಲಿಸಿದರು. ಮೆಗಾ ಯೋಜನೆ ಕಾರ್ಯಗತಗೊಳಿಸಿರುವ ಕೃಷ್ಣ ಮುಳಿಯ ಗ್ರೀನ್ ಎಲ್ಎಲ್ಪಿ ಸಂಸ್ಥೆಯ ಕೃಷ್ಣ ನಾರಾಯಣ ಮುಳಿಯ ಮತ್ತು ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಯ ಪ್ರಶಾಂತ್ ದೇವಾಡಿಗ ಮತ್ತು ಭವ್ಯಾ ದಾಮೋದರ್ ಅವರನ್ನು ಶ್ಲಾಘಿಸಿದರು. ಪೆಸೋ ಲೈಸೆನ್ಸ್ ಸಿಕ್ಕಿದ ತಕ್ಷಣ ಸಿಎನ್ಜಿ ಮಾರಾಟ ಆರಂಭವಾಗಲಿದೆ ಎಂದು ತಿಳಿಸಲಾಯಿತು.
ಒಣ ಕಸ ಸ್ವೀಕರಿಸಿ, ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಎಂಆರ್ಎಫ್ ಘಟಕ 1.60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿ ಪೂರ್ತಿಗೊಂಡಿದ್ದು, ಯಂತ್ರ ಅಳವಡಿಕೆ ನಡೆಯಬೇಕಿದೆ ಎಂದು ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹಗೊಳ್ಳುವ ತ್ಯಾಜ್ಯ ಪ್ರಮಾಣ, ಪೌರ ಕಾರ್ಮಿಕರ ಸಂಖ್ಯೆ, ಸಂಗ್ರಹ ವ್ಯವಸ್ಥೆ ಮತ್ತಿತರ ಸಮಗ್ರ ಮಾಹಿತಿಯನ್ನು ಸಂಸದರು ಪಡೆದುಕೊಂಡರು.
ಜೇಸಿಬಿ ಉದ್ಘಾಟನೆ:
ಡಂಪಿಂಗ್ಯಾರ್ಡ್ಗೆ ನಗರಸಭೆಯ 15ನೇ ಹಣಕಾಸು ನಿಧಿಯಲ್ಲಿ 26 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾದ ಹೊಸ ಜೇಸಿಬಿಯನ್ನು ಈ ಸಂದರ್ಭ ಸಂಸದರು ಲೋಕಾರ್ಪಣೆ ಮಾಡಿದರು.
ಪುತ್ತೂರು ನಗರಸಭೆಯು ಸಾರ್ವಜನಿಕ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಶೂನ್ಯ ತ್ಯಾಜ್ಯ ಯೋಜನೆ ಜಾರಿಗೊಳಿಸುತ್ತಿದೆ. ಇದು ವಿಶ್ವದಲ್ಲಿ ಪುತ್ತೂರಿಗೆ ಬಹುದೊಡ್ಡ ಕೊಡುಗೆ. ಹಸಿ ಕಸವೆಲ್ಲವೂ ಇಲ್ಲಿ ಬಯೋಗ್ಯಾಸ್ ಆಗುತ್ತಿದೆ. ಸ್ವಚ್ಛ ಭಾರತ್ ಮಿಶನ್ ಯೋಜನೆಯಲ್ಲಿ ನೀಡಿದ ಅನುದಾನದಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಪುತ್ತೂರಿನ ಈ ವೈಜ್ಞಾನಿಕ ಯೋಜನೆ ಎಲ್ಲ ನಗರಾಡಳಿತ ಸಂಸ್ಥೆಗಳಿಗೂ ಮಾದರಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ ಜೈನ್, ನಗರಸಭೆ ಸದಸ್ಯರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಮುಖಂಡ ಹರಿಪ್ರಸಾದ್ ಯಾದವ್,ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ಕೃಷ್ಣ ಮುಳಿಯ ಗ್ರೀನ್ ಎಲ್ಎಲ್ಪಿಯ ಕೃಷ್ಣ ನಾರಾಯಣ ಮುಳಿಯ, ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಯ ಪ್ರಶಾಂತ್ ದೇವಾಡಿಗ, ಭವ್ಯಾ ದಾಮೋದರ್, ಪ್ರಾಜೆಕ್ಟ್ ಡೈರೆಕ್ಟರ್ ಡಾ.ರಾಜೇಶ್ ಬೆಜ್ಜಂಗಳ, ನಗರಸಭೆ ಇಂಜಿನಿಯರ್ಗಳು ಉಪಸ್ಥಿತರಿದ್ದರು.


