

ಕೋಟೆಕಾರು, ಉಳ್ಳಾಲ: ಕೋಟೆಕಾರು ಪ್ರದೇಶದಲ್ಲಿರುವ Bombay Saw Mill ವಿರುದ್ಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಗಂಭೀರ ಕ್ರಮ ಕೈಗೊಂಡಿದ್ದು, ಕಾರ್ಖಾನೆಗೆ SHOWCAUSE ನೋಟಿಸ್ ಜಾರಿ ಮಾಡಿ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಿರುವುದು ಬೆಳಕಿಗೆ ಬಂದಿದೆ.
ಮಂಡಳಿಯಿಂದ ನೀಡಲಾದ ನೋಟಿಸ್ ಪ್ರಕಾರ, ಕಾರ್ಖಾನೆಗೆ ನೀಡಲಾಗಿದ್ದ ಮಾಲಿನ್ಯ ಅನುಮತಿ (Consent) 2018ರಲ್ಲಿ ಅವಧಿ ಮುಗಿದಿದ್ದರೂ, ನಂತರ ನವೀಕರಣ ಮಾಡದೆ ಕಾರ್ಯಾಚರಣೆ ಮುಂದುವರಿಸಿರುವುದು ಸ್ಪಷ್ಟವಾಗಿದೆ ಎಂದು ತಿಳಿದುಬಂದಿದೆ.
27/03/2026 ರಂದು ನಡೆದ ಪರಿಶೀಲನೆ ವೇಳೆ, ಕಾರ್ಖಾನೆ ಯಾವುದೇ ಮಾನ್ಯ ಅನುಮತಿ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಚಿಮ್ನಿಯಿಂದ ದಟ್ಟ ಕಪ್ಪು ಹೊಗೆ ಹೊರಬರುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಚಿಮ್ನಿಗೆ ಸಂಬಂಧಿಸಿದ ಮಾಲಿನ್ಯ ಪರೀಕ್ಷೆ ನಡೆಸಲು ಅಗತ್ಯ ಸೌಲಭ್ಯಗಳಿಲ್ಲದೇ ಕಾರ್ಯನಿರ್ವಹಿಸಿರುವುದೂ ದಾಖಲಾಗಿದೆ.
ಇನ್ನಷ್ಟು ಆತಂಕಕಾರಿ ವಿಷಯವೆಂದರೆ, ಕಾರ್ಖಾನೆಯ ಸುತ್ತಮುತ್ತ ವಾಸಿಸುವ ಜನರು ಕಣ್ಣು ಕೆರಳಿಕೆ, ಗಂಟಲು ಉರಿ, ವಾಂತಿ ಹಾಗೂ ಉಸಿರಾಟದ ತೊಂದರೆ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿರುವ ಬಗ್ಗೆ ನೋಟಿಸ್ನಲ್ಲಿ ಉಲ್ಲೇಖವಾಗಿರುವುದು. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟಾಗಿರುವುದನ್ನು ಅಧಿಕಾರಿಗಳು ಗಮನಿಸಿದಂತೆ ತೋರುತ್ತಿದೆ.
ನೋಟಿಸ್ ಪ್ರಕಾರ, ಕಾರ್ಖಾನೆಗೆ ಮಂಡಳಿಯಿಂದ ಅನುಮತಿ ಪಡೆಯುವ ತನಕ ಕಾರ್ಯಾಚರಣೆ ಸಂಪೂರ್ಣವಾಗಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಜೊತೆಗೆ, 7 ದಿನಗಳೊಳಗೆ ಸ್ಪಷ್ಟನೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಇಲ್ಲವಾದರೆ, ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಬೆಳವಣಿಗೆಯೊಂದಿಗೆ, ಸ್ಥಳೀಯವಾಗಿ ಈಗಾಗಲೇ ನೀಡಲಾಗಿದ್ದ ಪಂಚಾಯತ್ ನೋಟಿಸ್ ಮತ್ತು KSPCB ನ ಕಠಿಣ ಕ್ರಮಗಳ ನಡುವೆ ವ್ಯತ್ಯಾಸವಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಎಬ್ಬಿಸಿದೆ. “ಪಂಚಾಯತ್ ನೋಟಿಸ್ ಮಾತ್ರ, ಆದರೆ KSPCB ನಿಂದ ನೇರವಾಗಿ ‘ಸ್ಟಾಪ್ ಆಪರೇಷನ್’ ಆದೇಶ” ಎಂಬ ಮಾತುಗಳು ಕೇಳಿಬರುತ್ತಿವೆ.
ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ, ಈ ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


