
ಸುಳ್ಳು ದಾಖಲೆ ನೀಡಿ ವ್ಯಕ್ತಿಯೊಬ್ಬರು ಅಕ್ರಮ ಪಾಸ್ಪೋರ್ಟ್ ಪಡೆಯಲು ನೆರವಾಗಿದ್ದ ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ನಕಲಿ ವರದಿ ಮತ್ತು ಅಧಿಕಾರಿಯ ಸಹಿ ಪೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯ ಪ್ರದೀಪ್ ಬಂಧಿತ ಪೊಲೀಸ್ ಸಿಬ್ಬಂದಿ. ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿಚಾರಣಾಧೀನ ಖೈದಿಯಾಗಿದ್ದ ಶಕ್ತಿದಾಸ್ ಎಂಬಾತ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು ಕಳೆದ ಫೆಬ್ರವರಿಯಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಳಾಸ ತಾಳೆಯಾಗದ ಕಾರಣ ಅರ್ಜಿಯನ್ನು ಬೀಟ್ ಪೊಲೀಸ್ ಸಿಬ್ಬಂದಿ ಸಾಬು ಮಿರ್ಜಿ ತಿರಸ್ಕರಿಸಿದ್ದರು.
ಜೂನ್ನಲ್ಲಿ ಶಕ್ತಿದಾಸ್ ಮರು ಅರ್ಜಿ ಸಲ್ಲಿಸಿದ್ದರು. ಬೀಟ್ ಸಿಬ್ಬಂದಿ ಸಾಬು ಮಿರ್ಜಿಗೆ ತಿಳಿಸದೇ ಅವರ ಹೆಸರಲ್ಲೇ ಸಿಬ್ಬಂದಿ ಪ್ರದೀಪ್ ವರದಿ ತಯಾರಿಸಿದ್ದರು. ಮೇಲಧಿಕಾರಿಗಳಿಂದ ಶಿಫಾರಸು ಮಾಡಿಸಿದ ಬಳಿಕ ಪರಿಶೀಲನಾ ದಾಖಲೆಗಳನ್ನು ನಾಶ ಮಾಡಿದ್ದರು.
2025ರ ಡಿಸೆಂಬರ್ 12ರಂದು ದಾಖಲೆಗಳನ್ನು ಪರಿಶೀಲಿಸುವ ವೇಳೆ ಈ ವಿಷಯ ಬಹಿರಂಗವಾಯಿತು. ಸಿಬ್ಬಂದಿ ಸಾಬು ಮಿರ್ಜಿ ನೀಡಿದ ದೂರಿನನ್ವಯ ಪ್ರದೀಪ್ ಹಾಗೂ ಶಕ್ತಿದಾಸ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


