
ಬೆಳ್ತಂಗಡಿ, : ಪಿಕಪ್ ವಾಹನದಲ್ಲಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಮರಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ರಾತ್ರಿ ಬೆಳ್ತಂಗಡಿ ತಾಲೂಕು ಕಕ್ಕಿಂಜೆ ಕಡೆಯಿಂದ ಚಾರ್ಮಾಡಿ ಕಡೆಗೆ ಆರೋಪಿ ಚಾರ್ಮಾಡಿ ಗ್ರಾಮ ನಿವಾಸಿ ಫಯಾಝ್ (25) ಎಂಬಾತ ಕೆಎ21 ಬಿ0593 ನೋಂದಣಿ ಸಂಖ್ಯೆಯ ಬೊಲೆರೋ ಕಂಪನಿಯ ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಠಾಣಾ ಪಿಎಸ್ಸೈ ಅನಿಲ ಕುಮಾರ ಡಿ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಮರಳನ್ನು ಚಾರ್ಮಾಡಿಯ ಹೊಸಮಠ ಎಂಬಲ್ಲಿನ ಮೃತ್ಯುಂಜಯ ನದಿಯಿಂದ ಕಳವು ಮಾಡಿ, ಹೆಚ್ಚಿನ ಹಣ ಸಂಪಾದನೆ ಮಾಡುವ ಸಲುವಾಗಿ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿರುವ ಹಿನ್ನಲೆಯಲ್ಲಿ ವಾಹನ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.



