
ಹಳೆಯ ಮನೆಯಲ್ಲಿ ವಾಸ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಂದೂರು ಗ್ರಾಮದ ಅಗರಿಮೂಲೆ ಎಂಬಲ್ಲಿ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯೂರು ಸಮೀಪದ ಬೆಳಂದೂರು ಅಗರಿ ಮೂಲೆ ನಿವಾಸಿ ಜಮೀಳಾ(40), ಆಕೆಯ ಪತಿ ಮಹಮ್ಮದ್(45) ಹಾಗೂ ಪುತ್ರಿ ಮುರ್ಶಿದಾ ಹಲ್ಲೆಗೆ ಒಳಗಾದವರು.
ಕಳೆದ ಆರು ತಿಂಗಳಿಂದ ತಾಯಿಯ ಹಳೆಯ ಮನೆಯಲ್ಲಿ ಈ ಕುಟುಂಬ ವಾಸವಾಗಿದ್ದು ಇದಕ್ಕೆ ಆಕ್ಷೇಪಿಸಿ ಹೊರ ನಡೆಯುವಂತೆ ಬೆದರಿಸಿ ಜಮೀಳಾ ಅವರ ಸಹೋದರ ಮತ್ತು ಅತ್ತಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಚೂರಿಯಿಂದ ಎಡ ಕೈಗೆ ಇರಿದಿರುವುದಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಮಗಳಿಗೂ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ನೆರೆಕೆರೆಯವರು ಹಲ್ಲೆ ಮಾಡದಂತೆ ತಡೆದಿದ್ದಾರೆ. ಇದೇ ವೇಳೆ ಮನೆಯ ಛಾವಣಿಯ ಸಿಮೆಂಟ್ ಶೀಟಿಗೆ ಕಲ್ಲು ಹೊಡದ ಪರಿಣಾಮ ಸಿಮೆಂಟ್ ಶೀಟ್ ಹಾನಿಯಾಗಿ ನಷ್ಟ ಉಂಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೋಲೀಸರು ಹಮೀದ್ ಹಾಗೂ ತಾಹಿರ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.



