
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಳು ಮಂದಿಯನ್ನು ಗಡಿಪಾರು ಮಾಡಲಾಗಿದೆ. ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಸಾರ್ವಜನಿಕ ಶಾಂತಿ ಕಾಪಾಡುವ ಸಲುವಾಗಿ ಪದೇಪದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಏಳು ಮಂದಿಯನ್ನು ಗಡಿಪಾರು ಮಾಡಿ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶಿಸಿದ್ದಾರೆ. ಈ ಏಳು ಮಂದಿ ಮೂರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಶೋಕನಗರದ ಕೊಡಿಕಲ್ ಅಂಗಡಿಗುಡ್ಡೆಯ ಪ್ರೀತಮ್ ಅಲಿಯಾಸ್ ಅಭಿಲಾಶ್, ಊರ್ವದ ಸಿಪಿಸಿ ಕಾಂಪೌಂಡ್ ಬಳಿಯ ನಿವಾಸಿ ಹೇಮಂತ್ ಅಲಿಯಾಸ್ ಸೋನು, ಕೋಟೆಕಾರ್ ಕುಂಪಲದ ಶಿವರಾಜ್ ಅಲಿಯಾಸ್ ಶಿವು, ಸೋಮೇಶ್ವರ ಪಿಲಾರ್ ನ ಎಡ್ವಿನ್ ರಾಹುಲ್ ಡಿಸೋಜಾ ಅಲಿಯಾಸ್ ರಾಹುಲ್, ಉಳ್ಳಾಲ ಮೇಲಂಗಡಿಯ ಇಬ್ರಾಹಿಂ, ಕೋಡಿಕಲ್ ನಿವಾಸಿ ಪ್ರವೀಣ್ ಪೂಜಾರಿ, ದೇರಳ ಕಟ್ಟೆಯ ಮೊಹಮ್ಮದ್ ಮುಸ್ತಫ ಅಲಿಯಾಸ್ ಮುಸ್ತಫ ಗಡಿಪಾರಿಗೆ ಒಳಗಾದವರು.


