ಮುಡಾದಲ್ಲಿ ಕಮಿಷನರ್ ನೂರ್ ಝಹರಾ ವರ್ಗಾವಣೆಗೆ ಬ್ರೋಕರುಗಳಿಂದಲೇ ಕಸರತ್ತು ; ಮತ್ತೆ ಮಹಮ್ಮದ್ ನಜೀರ್ ಕರೆತರಲು ಪ್ರಬಲ ಲಾಬಿ, ವ್ಯವಸ್ಥೆ ಸುಧಾರಣೆಗೆ ‘ತನ್ನ’ವರಿಂದಲೇ ಅಡ್ಡಗಾಲು !

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ದಲ್ಲಿ ಬ್ರೋಕರ್ ಹಾವಳಿಯನ್ನು ನಿಯಂತ್ರಿಸಲು ಮುಂದಾದ ಕಮಿಷನರ್ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆ ಮಾಡಿಸಲು ಬ್ರೋಕರುಗಳೇ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಆ ಜಾಗಕ್ಕೆ ಈ ಹಿಂದೆ ಮುಡಾದಲ್ಲಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಅಂಚಿನಲ್ಲಿರುವ ಮಹಮ್ಮದ್ ನಜೀರ್ ಅವರನ್ನು ಕರೆತರಲು ಪ್ರಬಲ ಲಾಬಿ ನಡೆದಿದೆ

ಮಂಗಳೂರು, ಜೂನ್ 10: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ದಲ್ಲಿ ಬ್ರೋಕರ್ ಹಾವಳಿಯನ್ನು ನಿಯಂತ್ರಿಸಲು ಮುಂದಾದ ಕಮಿಷನರ್ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆ ಮಾಡಿಸಲು ಬ್ರೋಕರುಗಳೇ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಆ ಜಾಗಕ್ಕೆ ಈ ಹಿಂದೆ ಮುಡಾದಲ್ಲಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಅಂಚಿನಲ್ಲಿರುವ ಮಹಮ್ಮದ್ ನಜೀರ್ ಅವರನ್ನು ಕರೆತರಲು ಪ್ರಬಲ ಲಾಬಿ ನಡೆದಿದೆ.

2024ರ ಮಾರ್ಚ್ 22ರಂದು ಆಗಿನ ಮುಡಾ ಕಮಿಷನರ್ ಆಗಿದ್ದ ಮನ್ಸೂರ್ ಆಲಿ, ಕನ್ವರ್ಷನ್ ವಿಚಾರದಲ್ಲಿ ಬಿಲ್ಡರ್ ಒಬ್ಬರಿಂದ 25 ಲಕ್ಷ ಲಂಚ ಕೇಳಿದ್ದಕ್ಕಾಗಿ ಲೋಕಾಯುಕ್ತ ದಾಳಿ ನಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಮಧ್ಯವರ್ತಿ ಮತ್ತು ಕಮಿಷನರ್ ಇಬ್ಬರೂ ಅರೆಸ್ಟ್ ಆಗಿದ್ದರು. ಆನಂತರ, ಎಪ್ರಿಲ್ ವೇಳೆಗೆ ಮನ್ಸೂರ್ ಆಲಿಗೆ ದೂರದ ಸಂಬಂಧಿಯೂ ಆಗಿದ್ದ ನೂರ್ ಝಹರಾ ಖಾನಂ ಅವರನ್ನು ಕರೆತಂದು ಮುಡಾ ಕಮಿಷನರ್ ಮಾಡಲಾಗಿತ್ತು. ಮಹಿಳಾ ಅಧಿಕಾರಿಯಾಗಿದ್ದರೂ, ಮಂಗಳೂರು ಮುಡಾ ಕಚೇರಿ ಬ್ರೋಕರ್ ಸಂತೆಯಾಗಿದ್ದನ್ನು ಕಂಡು ಬೇಸತ್ತು ಸ್ವಲ್ಪ ಸುಧಾರಣೆ ತರಲು ಪ್ರಯತ್ನಿಸಿದ್ದರು. ಆದರೆ ಅವರನ್ನು ಕರೆತಂದಿದ್ದವರೇ ನೂರ್ ಝಹರಾ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ್ದರು

ಮುಡಾದಲ್ಲಿ ಬ್ರೋಕರ್ ಆಗಿರುವವರಲ್ಲಿ ಉಳ್ಳಾಲದವರೇ ಹೆಚ್ಚು. ಅದರಲ್ಲೂ ಕ್ಷೇತ್ರದ ಶಾಸಕ ಯು.ಟಿ ಖಾದರ್ ಬೆಂಬಲಿಗರೇ ಹೆಚ್ಚಿದ್ದಾರೆ. ಮಂಗಳೂರು ಮುಡಾ ಕಚೇರಿಯಲ್ಲಿ ಬ್ರೋಕರ್ ವ್ಯವಹಾರ ಎಷ್ಟಿದೆಯಂದ್ರೆ, ಆರು ತಿಂಗಳ ಹಿಂದೆ ಬ್ರೋಕರ್ ಒಬ್ಬ ಕಚೇರಿ ಒಳಬಂದು ಅಧಿಕಾರಿಗಳು ಇಲ್ಲದ ಸಮಯದಲ್ಲಿ ಫೈಲ್ ಗಳನ್ನು ತಡಕಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತಲ್ಲದೆ, ಜಾಲತಾಣದಲ್ಲಿಯೂ ವೈರಲ್ ಆಗಿತ್ತು. ಇದರಿಂದ ಇರಿಸುಮುರಿಸಿಗೆ ಒಳಗಾದ ಮುಡಾ ಕಮಿಷನರ್ ನೂರ್ ಝಹರಾ, ಯಾವುದೇ ಕಾರಣಕ್ಕೂ ಕಚೇರಿ ಒಳಗೆ ಬ್ರೋಕರ್ ಬರುವಂತಿಲ್ಲ ಎಂದು ಜನವರಿ 7ರಂದು ಆದೇಶ ಮಾಡಿದ್ದರು. ಈ ಕಾರಣದಿಂದ ಮತ್ತಷ್ಟು ಸಿಟ್ಟಿಗೆದ್ದ ದಲ್ಲಾಳಿಗಳು ನೂರ್ ಝಹರಾ ವಿರುದ್ಧ ಕತ್ತಿ ಮಸೆಯತೊಡಗಿದ್ದರು

ಮಾರ್ಚ್ ತಿಂಗಳ ಅಂತ್ಯದಲ್ಲಿ ಇದೇ ಬ್ರೋಕರುಗಳ ಅಟ್ಟಹಾಸ ತಾಳಲಾರದೆ ಮುಡಾ ಕಮಿಷನರ್ ನೂರ್ ಝಹರಾ ಅವರು ಉರ್ವಾ ಠಾಣೆಗೂ ದೂರು ನೀಡಿದ್ದರು. ತನಗೆ ವಾಟ್ಸಪ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ, ಬ್ರೋಕರುಗಳೆಲ್ಲ ವಾಟ್ಸಪ್ ಗ್ರೂಪ್ ಮಾಡಿ ಅವಾಚ್ಯ ನಿಂದನೆ ಮಾಡುತ್ತಿದ್ದಾರೆ, ಕಚೇರಿಯೊಳಗಡೆ ತನ್ನ ವಿರುದ್ಧ ವಾಮಾಚಾರ ಮಾಡಿದ್ದಾಗಿಯೂ ದೂರು ನೀಡಿದ್ದರು. ಉಳ್ಳಾಲ ಮೂಲದ ವಹಾಬ್ ಮತ್ತು ಸಬಿತ್ ಎಂಬಿಬ್ಬರ ವಿರುದ್ಧ ಉರ್ವಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಅದಕ್ಕೆ ಪೂರಕ ಸಾಕ್ಷಿಗಳನ್ನು ಕೊಡದೇ ಇದ್ದುದರಿಂದ ಮತ್ತು ಅಧಿಕಾರಿಯನ್ನು ಕಾಣದ ಕೈಗಳು ಕಟ್ಟಿಹಾಕಿದ್ದರಿಂದ ಪೊಲೀಸರು ಆ ಬಗ್ಗೆ ತನಿಖೆಗೆ ಕಾಳಜಿ ವಹಿಸಿರಲಿಲ್ಲ.

ನೂರ್ ಝಹರಾ ಖಾನಂ ಅವರು ಮಂಗಳೂರು ಮುಡಾ ಕಮಿಷನರ್ ಆಗಿ ಒಂದು ವರ್ಷ ಪೂರೈಸಿದ್ದರಿಂದ ಅವರನ್ನು ವರ್ಗಾವಣೆ ಮಾಡಿಸಿ, ತಮಗೆ ಬೇಕಾದ ವ್ಯಕ್ತಿಯನ್ನೇ ಕೂರಿಸಲು ಬ್ರೋಕರುಗಳೇ ಈಗ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರಭಾವಿಗಳ ಮೂಲಕ ನಗರಾಭಿವೃದ್ಧಿ ಇಲಾಖೆಯಲ್ಲಿ ಲಾಬಿ ನಡೆಸಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆಂಬ ಮಾಹಿತಿ ಲಭಿಸಿದೆ. ಮಂಗಳೂರು ನಗರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ನೂರ್ ಝಹರಾ ಅವರು ಕೂಡ ನಿರಾಸೆಗೊಂಡಿದ್ದು, ಇನ್ನೆಂದೂ ಇತ್ತ ಕಾಲಿಡುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ತನ್ನ ಸಮುದಾಯದ ಜನರಿಂದಲೇ ತೊಂದರೆ ಅನುಭವಿಸಿದ್ದೇನೆ, ಹೇಳಿಕೊಳ್ಳುವ ಹಾಗಿಲ್ಲ. ವ್ಯವಸ್ಥೆ ಅಷ್ಟು ಕೆಟ್ಟದಾಗಿದೆ ಎಂದು ತನ್ನ ಆಪ್ತರಲ್ಲಿ ನೋವು ಹೇಳಿಕೊಂಡಿದ್ದಾರಂತೆ.  

ಮಹಮ್ಮದ್ ನಜೀರ್ ಅವರು ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಮಿಷನರ್ ಆಗಿದ್ದರು. 2016ರಲ್ಲಿ ಮುಡಾ ಕಮಿಷನರ್ ಆಗಿಯೂ ಒಂದು ವರ್ಷ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಗರ ಯೋಜನಾಧಿಕಾರಿಯಾಗಿದ್ದರು. ಸದ್ಯಕ್ಕೆ ಅವರ ಸೇವಾವಧಿ ಒಂದು ವರ್ಷ ಬಾಕಿಯಿದೆ ಎನ್ನಲಾಗುತ್ತಿದ್ದು, ಮಹತ್ವದ ಖಾತೆಯತ್ತ ಗಮನ ನೆಟ್ಟಿದ್ದಾರಂತೆ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪುತ್ತೂರು ಯುವ ಕಾಂಗ್ರೆಸ್ ಸಭೆಯು ಶಾಸಕರಾದ ಅಶೋಕ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರಾದ ಅಖಿಲ್ ಕಲ್ಲಾರೆಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಶ್ಚಿಮ ಘಟ್ಟದ ತಪ್ಪಲಿನಗ್ರಾಮಗಳಲ್ಲಿ ಒಂಟಿ ಸಲಗ ಹಾವಳಿ-ಸೀತಾನದಿ: ಮುಂದುವರಿದ ಆನೆ ಕಾಟ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪುತ್ತೂರಿನ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರನಿಗೆ ನಿಂದನೆ ಆರೋಪಿ ಪುತ್ತೂರು ನಗರ ಠಾಣೆಗೆ ಹಾಜರು-ನೌಕರರಲ್ಲಿ ಕ್ಷಮೆಯಾಚನೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಅಹಮದಾಬಾದ್ ವಿಮಾನ ಪತನ: 53 ಬ್ರಿಟಿಷ್ ಪ್ರಜೆಗಳು, 169 ಭಾರತೀಯರು ವಿಮಾನದಲ್ಲಿದ್ರು