
ಮಾ.1ರಂದು ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ 32ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಹಾಗೂ ರಾಜ್ಯಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆ
ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ 32ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಹಾಗೂ ರಾಜ್ಯಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆ ಮಾ.1ರಂದು ನಡೆಯುವುದು ಎಂದು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಅವರು ತಿಳಿಸಿದರು.
ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.1ರಂದು ಬೆಳಿಗ್ಗೆ ಕಂಬಳವನ್ನು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಉದ್ಘಾಟಿಸುವರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರ ರತ್ನ ಕೆ.ಸೀತಾರಾಮ ರೈ ಅವರು ಅಧ್ಯಕ್ಷತೆ ವಹಿಸುವರು ಎಂದರು.
ಸಂಜೆ 6ಗಂಟೆಗೆ ಶಾಸಕ ಅಶೋಕ್ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಬ್ರಿಜೇಶ್ ಚೌಟ, ಉದ್ಯಮಿ ಪ್ರಕಾಶ್ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರಕುಮಾರ್, ಶಾಸಕರಾದ ಮಂಡ್ಯದ ರವಿ ಕುಮಾರ್ ಗಣಿಗ, ಬಂಟ್ವಾಳದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು,ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್.ಡಿಸೋಜ, ಕಿಶೋರ್ಕುಮಾರ್ ಬೊಡ್ಯಾಡಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ನಳಿನ್ಕುಮಾರ್ ಕಟೀಲು, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಚಿತ್ರನಟಿ ರಚಿತಾ ರಾಮ್, ನಿರೂಪಕಿ ಅನುಶ್ರೀ, ನಟರಾದ ಲೂಸ್ ಮಾದ ಯೋಗಿ, ಉಗ್ರಂ ಮಂಜು,ಗಗನ್ ಚಿನ್ನಪ್ಪ, ನಟಿ ರಚನಾ ರೈ, ನಿರ್ದೇಶಕ ಸುಕೇಶ್ ಶೆಟ್ಟಿ, ಬಿಗ್ಬಾಸ್ ಖ್ಯಾತಿಯ ಹನುಮಂತ್, ಧನರಾಜ್ ಆಚಾರ್ ಮತ್ತಿತರರು ವಿಶೇಷ ಆಕರ್ಷಣೆಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಗರಿ ನವೀನ್ ಭಂಡಾರಿ (ಆರ್.ಬಿ.ಐ.ಉತ್ತರ ವಲಯದ ಮಾಜಿ ನಿರ್ದೇಶಕ), ಸುರೇಶ್ ಭಟ್ ಬಲ್ನಾಡು (ಕೃಷಿ ತಜ್ಞ), ವಿಜಯ ಹಾರ್ವಿನ್ ( ಶೈಕ್ಷಣಿಕ-ಧಾರ್ಮಿಕ), ಹರಿಪ್ರಸಾದ್ ರೈ (ಹೆಚ್ಪಿಆರ್ ಪ್ಯಾರಾ ಮೆಡಿಕಲ್ ಕಾಲೇಜು ಸಂಸ್ಥಾಪಕ), ಸಾಲೆತ್ತೂರು ಪಂಜರಕೋಡಿ ಮಹಮ್ಮದ್ ಕುಂಞÂ ಮತ್ತು ಬಾಳೆಪುಣಿ ಸಂಕ ಇದುಕುಂಞÂ ಬ್ಯಾರಿ ( ಕಂಬಳ ಕ್ಷೇತ್ರ), ವಿನ್ಸಂಟ್ ಫೆರ್ನಾಂಡೀಸ್ ( ಸಾಮಾಜಿಕ ಮತ್ತು ಶೈಕ್ಷಣಿಕ) ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
6 ವಿಭಾಗದಲ್ಲಿ ಕಂಬಳ ಸ್ಪರ್ಧೆ
ಕಂಬಳ ಸ್ಪರ್ಧೆಗಳು ಕನೆಹಲಗೆ,ಅಡ್ಡ ಹಲಗೆ,ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ ಮತ್ತು ನೇಗಿಲು ಕಿರಿಯ ಎಂಬ 6 ವಿಭಾಗದಲ್ಲಿ ನಡೆಯುವುದು. ಇದೇ ಮೊದಲ ಬಾರಿಗೆ ಕಂಬಳ ಸ್ಪರ್ಧೆಗಳ ಜತೆಗೆ ರಾಜ್ಯ ಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆ ಅಯೋಜಿಸಲಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ಸ್ಪರ್ಧೆ ಆರಂಭಗೊಳ್ಳುವುದು ಎಂದು ಚಂದ್ರಹಾಸ ರೈ ಅವರು ತಿಳಿಸಿದರು.
ಕನಹಲಗೆ,ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ 2 ಪವನ್ ಚಿನ್ನದ ಬಹುಮಾನ ಮತ್ತು ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ 1 ಪವನ್ ಚಿನ್ನದ ಬಹುಮಾನ, ಅಡ್ಡಹಲಗೆ,ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ 1 ಪವನ್ ಚಿನ್ನ ಹಾಗೂ ದ್ವಿತೀಯ ಸ್ಥಾನಿಯಾದ ಕೋಣಗಳಿಗೆ ಅರ್ಧ ಪವನ್ ಚಿನ್ನದ ಬಹುಮಾನದ ಜತೆಗೆ ಕೋಟಿ-ಚೆನ್ನಯ ಟ್ರೋಫಿ ನೀಡಲಾಗುವುದು. ರಾಜ್ಯ ಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪ್ರಥಮ ರೂ.10 ಸಾವಿರ, ದ್ವಿತೀಯ ರೂ.7500 ಮತ್ತು ತೃತೀಯ ರೂ.5 ಸಾವಿರ ಬಹುಮಾನದ ಜತೆಗೆ ಕೋಟಿ-ಚೆನ್ನಯ ಟ್ರೋಫಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಸಂಚಾಲಕ ವಸಂತಕುಮಾರ್ ರೈ ದುಗ್ಗಳ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ,
ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಕಂಬಳ ಸಮಿತಿಯ ಪದಾಧಿಕಾರಿ ನಿರಂಜನ ರೈ ಮಠಂತಬೆಟ್ಟು ಹಾಜರಿದ್ದರು.


