ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇಫ್ತಾರ್‌ ಕೂಟ ಹಾಗೂ ಅದ್ಧೂರಿ ಪಾರ್ಟಿಗಳ ಹೆಸರಲ್ಲಿ ಸಿನಿಮಾ ರಂಗದ ದೈತ್ಯರನ್ನೆಲ್ಲ ಒಂದೆಡೆ ಗುಡ್ಡೆ ಹಾಕುತ್ತಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಸದ್ಯ ಎನ್‌ಸಿಪಿಯ ಅಜಿತ್‌ ಪವಾರ್ ಬಣದಲ್ಲಿರುವ ಸಿದ್ದಿಕಿ ಮೇಲೆ ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಶನಿವಾರ ರಾತ್ರಿ 9.30 ಗಂಟೆ ಸುಮಾರಿಗೆ ಬಾಬಾ ಸಿದ್ಧಿಕಿ ಅವರ ಮೇಲೆ ಮೂರು ಬುಲೆಟ್‌ಗಳನ್ನು ಹಾರಿಸಲಾಗಿತ್ತು. ಅವರ ಮಗ ಜೀಶನ್‌ ಸಿದ್ದಿಕಿ ಅವರ ಕಚೇರಿಯಲ್ಲಿ ಈ ದಾಳಿ ನಡೆದಿತ್ತು. ಜೀಶನ್‌ ಬಾಂದ್ರಾ ಪೂರ್ವದ ಶಾಸಕರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಬಾಬಾ ಸಿದ್ಧಿಕಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ಮೂಲಗಳ ಪ್ರಕಾರ ಕನಿಷ್ಠ ಒಂದು ಬುಲೆಟ್‌ ಅವರ ಎದೆಯ ಒಳಗೆ ಹೊಕ್ಕಿತ್ತು. ಅವರಿಗೆ ನಿರಂತರವಾಗಿ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್‌) ನೀಡಲಾಗುತ್ತಿತ್ತು. ಆದರೆ ವೈದ್ಯರ ಯತ್ನ ಫಲ ನೀಡದೆ ಅವರು ಅಸುನೀಗಿದ್ದಾರೆ.

ಮೂರು ಬಾರಿಯ ಶಾಸಕ: ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಾಬಾ ಸಿದ್ಧಿಕಿ ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ಕೈ ಪಾಳಯ ತೊರೆದು ಅಜಿತ್‌ ಪವಾರ್‌ ಅವರ ಎನ್‌ಸಿಪಿ ಬಣ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಜೀಶನ್‌ ಸಿದ್ದಿಕಿ ಅವರನ್ನು ಕಾಂಗ್ರೆಸ್‌ ಆಗಸ್ಟ್‌ನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.

ದಸರಾದಂದೇ ಈ ಗುಂಡಿನ ದಾಳಿ ನಡೆದಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎನ್‌ಸಿಪಿ ವಕ್ತಾರ ಬ್ರಿಜ್‌ಮೋಹನ್‌ ಶ್ರೀವಾಸ್ತವ, 'ತಮಗೆ ಯಾರಿಂದಲಾದರೂ ಬೆದರಿಕೆ ಇದೆ ಎಂದು ಸಿದ್ದಿಕಿ ಯಾವತ್ತೂ ಹೇಳಿರಲಿಲ್ಲ' ಎಂದು ಆಂಗ್ಲ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಬಾಬಾ ಸಿದ್ಧಿಕಿ ಅವರು 1999, 2004 ಹಾಗೂ 2009ರ ಚುನಾವಣೆಯಲ್ಲಿ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು 2004ರಿಂದ 2008ರವರೆಗೆ ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಹಾಗೂ ಎಫ್‌ಡಿಎ ಸಚಿವರೂ ಆಗಿದ್ದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಕಾರಣಕ್ಕೆ ಬಾಬಾ ಸಿದ್ಧಿಕಿ ಪರಿಚಿತರಾದರೂ, ರಾಜ್ಯದ ಹೊರಗಡೆ ಅದ್ಧೂರಿ ಪಾರ್ಟಿಗಳಿಗೆ ಜನಪ್ರಿಯರಾಗಿದ್ದರು. ಬಾಲಿವುಡ್‌ ಸೇರಿದಂತೆ ದೇಶದ ಚಿತ್ರರಂಗದ ಹೆಚ್ಚು ಕಡಿಮೆ ಎಲ್ಲಾ ದೊಡ್ಡ ದೊಡ್ಡ ಸ್ಟಾರ್‌ಗಳ ಜತೆಯೂ ವಿಶೇಷ ನಂಟು ಹೊಂದಿದ್ದ ಅವರು, ಶಾರುಖ್‌ ಖಾನ್‌ ಹಾಗೂ ಸಲ್ಮಾನ್‌ ಖಾನ್‌ ನಡುವೆ ನಡೆಯುತ್ತಿದ್ದ ಶೀತಲ ಸಮರವನ್ನು 2023ರ ಇಫ್ತಾರ್‌ ಕೂಟದಲ್ಲಿ ಬಗೆಹರಿಸಿ ಭಾರೀ ಹೆಸರು ಗಳಿಸಿದ್ದರು.

News Editor

Learn More →

Leave a Reply

Your email address will not be published. Required fields are marked *