
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಕೆ ಲಕ್ಷ್ಮೀನಾರಾಯಣ್ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಕುಂದಾಪುರ,ಸೆ.27: ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಲಕ್ಷ್ಮೀ ನಾರಾಯಣ (84) ಅವರು ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ.
ಲಕ್ಷ್ಮೀನಾರಾಯಣ ಅವರು, ಉದ್ಯಮಿಯಾಗಿ
ಖ್ಯಾತಿಗಳಿಸಿದ್ದರು. ಮುಂದೆ ರಾಜಕೀಯದಲ್ಲಿ ಆಸಕ್ತಿ ಹೊಂದಿ ಮೂರು ಭಾರಿ ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.2 ಬಾರಿ ಸೋಲು ಕಂಡಿದ್ದ ಅವರು 2008ರಲ್ಲಿ ಜಯಗಳಿಸಿ ತನ್ನ ಶಾಸಕತ್ವದ ಅವಧಿಯಲ್ಲಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ.
ಹಲವು ವರ್ಷಗಳಿಂದ ಬೇಡಿಕೆಯಲ್ಲಿದ್ದ ಬೈಂದೂರು ತಾಲೂಕು ರಚನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದ ಅವರು, ಗುಂಡೂರು ಡ್ಯಾಂ, ಮರವಂತೆ ಬಂದರು, ಕೊಡೇರಿ ಕಿರು ಬಂದರು, ಮರವಂತೆ – ಪಡುಕೋಣೆ ಸೇತುವೆ, ಕನ್ನಡಕುದ್ರು ಸೇತುವೆ, ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಅಧಿಕಾರಾವಧಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಆರೋಪಗಳಿಗೂ ಗುರಿಯಾಗದೇ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಲಕ್ಷ್ಮೀನಾರಾಯಣ ಅವರದ್ದಾಗಿತ್ತು.
ಅವರು ವಿಶ್ವರಾಮಕ್ಷತ್ರಿಯ ಮಹಾಸಂಘದ ಸ್ಥಾಪಕಾಧ್ಯಕ್ಷರಾಗಿ, ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಗೌರವಾಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೂಲತಃ ಕುಂದಾಪುರದವರಾದ ಕೆ. ಲಕ್ಷ್ಮೀನಾರಾಯಣ ಅವರು, ಬೆಂಗಳೂರಿನಲ್ಲಿಯೇ ಉದ್ಯಮ ಹೊಂದಿದ್ದರು. ತಮ್ಮ ಶಾಸಕತ್ವ ಅವಧಿಯ ಬಳಿಕ ಬೆಂಗಳೂರಿನ ಡಾಲರ್ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ನೆಲೆಸಿದ್ದರು. ಅವರು ಓರ್ವ ಪುತ್ರ, ಪುತ್ರಿ, ಕುಟುಂಬವರ್ಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಸೆ.27ರ ಸಂಜೆ 4.30 ಬನಶಂಕರಿಯ ಚಿತ್ತಾಗಾರದಲ್ಲಿ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.


