
ಕಾಂಗ್ರೆಸ್ ಪಕ್ಷಕ್ಕಾಗಿ ಜೀವವನ್ನು ಸವೆಸಿದ ಇಬ್ರಾಹಿಂ ಕೋಡಿಜಾಲ್ ಅವರಿಗೆ ಕೇವಲ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಪ್ರಭಾರಿ ಅಧ್ಯಕ್ಷ ಸ್ಥಾನಕ್ಕೇ ಸೀಮಿತಗೊಳಿಸಿ ಅಧ್ಯಕ್ಷ ಸ್ಥಾನವನ್ನೂ ಕೊಡಿಸಲು ಕೆಪಾಸಿಟಿ ಇಲ್ಲದೆ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿಸಿದ ಕಾಂಗ್ರೆಸ್ ನವರಿಗೆ ಅಲ್ಪಸಂಖ್ಯಾತ ಮೋರ್ಚಾವನ್ನು ಟೀಕಿಸಲು ಯಾವುದೇ ಅರ್ಹತೆ ಇಲ್ಲ ಎಂದು ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡರಾದ ಸಿದ್ದೀಕ್ ತಲಪಾಡಿ ಟೀಕಿಸಿದ್ದಾರೆ.
ಸ್ವಾತಂತ್ರ್ಯನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಪಕ್ಷಕ್ಕಾಗಿ ಜೀವಕೊಟ್ಟ ಮುಸ್ಲಿಮರಿಗೆ ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ಕೇವಲ ಮಂತ್ರಿ ಸ್ಥಾನ ನೀಡಿದ್ದು ಬಿಟ್ಟರೆ ಪ್ರಧಾನಿ, ಮುಖ್ಯಮಂತ್ರಿ ಯಂತ ಉನ್ನತ ಹುದ್ದೆ ನೀಡಿಲ್ಲ. ವಿದಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅತ್ಯಧಿಕ ಮತ ನೀಡಿದ ಮುಸ್ಲಿಮರಿಗೆ ಕೊಟ್ಟ ಸ್ಥಾನವಾದರೂ ಏನು? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ತಧಿಕ ಮತ ಹಾಕಿದ ಮುಸ್ಲಿಮರಿಗೆ ಪಕ್ಷದಲ್ಲೂ ಉನ್ನತ ಸ್ಥಾನ ನೀಡದೆಯೇ? ಎನ್ನುವುದನ್ನು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಲಿದೆ ಎಂದು ಸಿದ್ದೀಕ್ ತಲಪಾಡಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ ಮುಸ್ಲಿಮರನ್ನೇ ಬಳಸಿ ಮುಸ್ಲಿಮರ ಬಸ್ಸಿಗೆ ಕಲ್ಲು ಹೊಡೆಸಿದ್ದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಲ್ಲ. ಬಸ್ಸಿನಲ್ಲಿದ್ದ ಹಿರಿಯ ಮಹಿಳೆಯ ಕಣ್ಣಿಗೆ ಗಾಯವಾದಾಗ ಕಣ್ಣೆತ್ತಿಯೂ ನೋಡದೆ ಹೋಗಿದ್ದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಲ್ಲ ಎನ್ನುವುದು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು ನೆನಪಿಟ್ಟುಕೊಳ್ಳಬೇಕು. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಬಂದಾಗ ಬಂಟಿಂಗ್, ಫ್ಲೆಕ್ಸ್ ಕಟ್ಟಲು, ಕರಪತ್ರ ಹಂಚಲು ಮಾತ್ರ ಅಲ್ಪಸಂಖ್ಯಾತ ಸಮುದಾಯದ ಹುಡುಗರು ಬೇಕು. ಆದರೆ ಅಧಿಕಾರದ ವಿಷಯ ಬಂದಾಗ ಯಾರಿಗೂ ಬೇಡದ ಪೋಸ್ಟ್ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರನ್ನೂ ಬೆಳೆಸಲಾಗದ ಪರಿಣಾಮವನ್ನು ಕಾಂಗ್ರೆಸ್ ಪಕ್ಷ ಎದುರಿಸುತ್ತಿದೆ ಎನ್ನುವ ನೆನಪು ಬಿಜೆಪಿಯನ್ನು ಟೀಕಿಸುವವರಿಗೆ ಇರಬೇಕು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವನ್ನು ಟೀಕಿಸಿದ ಮಾತ್ರಕ್ಕೆ ಕಾಂಗ್ರೆಸ್ ನಲ್ಲಿ ದೊಡ್ಡ ಸ್ಥಾನ ಸಿಗಬಹುದು ಎನ್ನುವುದು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು ತಿರುಕನ ಕನಸು ಕಾಣುತ್ತಿದ್ದಾರೆಂದು ಸಿದ್ದೀಕ್ ತಲಪಾಡಿ ಲೇವಡಿ ಮಾಡಿದ್ದಾರೆ.


