
ಕಾರ್ಕಳ 06: ಕರಾವಳಿಯು ಪರಶುರಾಮನ ಸೃಷ್ಟಿ, ಆದರೂ ಇಲ್ಲಿಯವರೆಗೆ ಕರಾವಳಿಯ ಯಾವುದೇ ಭಾಗದಲ್ಲೂ ಪರಶುರಾಮನ ಬಗೆಗಿನ ಇತಿಹಾಸವನ್ನು ಸಾರ್ವಜನಿಕರಿಗೆ ತೋರಿಸುವ ಯಾವುದೇ ಕಾರ್ಯಗಳು ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ರವರ ವಿಶಿಷ್ಟ ಕಲ್ಪನೆಯೇ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಂ ಪಾರ್ಕ್. ಇಂತಹ ವಿಶಿಷ್ಟ ಕಲ್ಪನೆಯ ಪ್ರವಾಸೋದ್ಯಮ ದೃಷ್ಟಿಕೋನದಲ್ಲಿ ಅಭಿವೃದ್ಧಿಪಡಿಸಿದ ಥೀಂ ಪಾರ್ಕ್ಗೆ ಕಾಂಗ್ರೆಸ್ ನಾಯಕ ಉದಯ್ ಕುಮಾರ್ ಶೆಟ್ಟಿ ಅಡ್ಡಿಪಡಿಸುತ್ತಿರುವುದನ್ನು ಹಿಂದೂ ಹಿತರಕ್ಷಣಾ ಸಮಿತಿ ಖಡಾಖಂಡಿತವಾಗಿ ಖಂಡಿಸುತ್ತದೆ.
ಬೈಲೂರಿನ ಪರಶುರಾಮ ಥೀಂ ಪಾರ್ಕ್ ಇಡೀ ಕರಾವಳಿ ತೀರದ ಜನರ ಹೆಮ್ಮೆಯ ಯೋಜನೆ. ಈ ವಿಷಯದಲ್ಲಿ ಕ್ಷುಲ್ಲಕ ರಾಜಕೀಯ ಮಾಡಿ ಕಾಮಗಾರಿಗೆ ನೀವು ಅಡ್ಡಿಪಡಿಸಿದರೆ ಹಿಂದೂ ಹಿತರಕ್ಷಣಾ ವೇದಿಕೆ ಸುಮ್ಮನೆ ಕೂರುವುದಿಲ್ಲ. ಸಾಧ್ಯವಾದರೆ ನಿಮ್ಮದೇ ಸರ್ಕಾರವಿದೆ, ನಿಮಗೆ ಸಂಪೂರ್ಣ ಅವಕಾಶವಿದೆ. ಇದನ್ನು ಬಳಸಿಕೊಂಡು ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ.
ನಾವು ಕಳೆದ ಒಂದು ವರ್ಷದಿಂದ ನಿಮ್ಮ ನಾಟಕ ನೋಡುತ್ತಾ ಇದ್ದೇವೆ. ಮೊದಲಿಗೆ ನಕಲಿ ಎಂದಿರಿ, ನಂತರ ಪ್ಲಾಸ್ಟಿಕ್ ಎಂದಿರಿ, ಆಮೇಲೆ ಫೈಬರ್ ಎಂದಿರಿ ಮುಂದುವರೆಯುತ್ತಾ ಸೊಂಟದ ಮೇಲೆ ಮಾತ್ರ ಫೈಬರ್ ಎಂದಿರಿ. ಇದೀಗ ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಸರಿಯಿಲ್ಲ ಶಿಲ್ಪಿ ಸರಿಯಿಲ್ಲ ಎನ್ನುತ್ತಿದ್ದೀರಿ. ಕಾಮಗಾರಿ ಪುನರ್ ಆರಂಭಗೊಂಡಾಗ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ಹಾಕಿದಿರಿ. ಮರುದಿವಸ ಬೆಟ್ಟಕ್ಕೆ ಬೆಂಕಿ ಹಚ್ಚಿದಿರಿ. ನೀವು ಬರೇ ಥೀಂ ಪಾರ್ಕ್ ರಸ್ತೆಗೆ ಮಣ್ಣು ಹಾಕಿರುವುದು ಅಲ್ಲ ಇಡೀ ಕಾರ್ಕಳದ ಅಭಿವೃದ್ಧಿಗೇ ಹಾಗೂ ಥೀಂ ಪಾರ್ಕ್ ಬೆಟ್ಟಕ್ಕೆ ಬೆಂಕಿ ಹಚ್ಚಿರುವುದು ಅಲ್ಲ ನಿಮಗೆ ನೀವೇ ಕೊಳ್ಳಿ ಇಟ್ಟುಕೊಂಡಿರುವುದು. ಇದು ನಿಮ್ಮ ರಾಜಕೀಯ ಅವನತಿಯ ಆರಂಭ. ನಿಮ್ಮ ಇಂತಹ ನಾಟಕಗಳನ್ನು ಇನ್ನು ನೋಡುತ್ತಾ ಕೂರಲು ನಮ್ಮಿಂದ ಸಾಧ್ಯವಿಲ್ಲ.



