
ಕಾರು ಡಿವೈಡರ್ಗೆ ಢಿಕ್ಕಿ; ಚಾಲಕ ಅಪಾಯದಿಂದ ಪಾರು
ಮೂಲ್ಕಿ: ಇಲ್ಲಿಯ ಹಳೆಯಂಗಡಿ ಬಿಲ್ಲವ ಸಂಘದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದು ಸಂಪೂರ್ಣ ಜಖಂ ಗೊಂಡ ಘಟನೆ ಸಂಭವಿಸಿದೆ.
ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಈ ಕಾರನ್ನು ಚಲಾಯಿಸುತ್ತಿದ್ದ ಮಂಗಳೂರಿನ ಪ್ರಶಾಂತ್ ಎಂಬವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿರಂತರ ಅಪಘಾತ ಇಲ್ಲಿ ಇತ್ತೀಚೆಗೆ ಹಲವು ಅಫಘಾತಗಳು ನಡೆದಿದ್ದು, ಸಾವು ನೋವು ಉಂಟಾಗಿದೆ. ಇಲ್ಲಿಯ ಪೆಟ್ರೋಲ್ ಬಂಕ್ ಬಳಿ ಪಡುಪಣಂಬೂರು ಅರಮನೆ ರಸ್ತೆ ಕಡೆಯಿಂದ ಬರುವ ಹಾಗೂ ತೋಕೂರು ರಸ್ತೆಗೆ ಹೋಗುವ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳು ವಿರುದ್ಧ ದಿಕ್ಕಿನಲ್ಲಿ ನಿರಂತರವಾಗಿ ಸಾಗುತ್ತಿವೆ. ಈ ಸ್ಥಳದಲ್ಲಿಯೂ ಅಪಘಾತಗಳು ನಿತ್ಯ ಎಂಬಂತೆ ನಡೆಯುತ್ತಿವೆ. ಇದಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕೇಂದು ಸ್ಥಳೀಯರು ಆಗ್ರಹಿಸಿದ್ದಾರೆ.


