ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟನೆ

ಪುತ್ತೂರು: ಪ್ರಜಾಸೇವೆ ಆಂದೋಲನವು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಯಾಗಿದ್ದು, ಜನ ಕಾಲಬುಡಕ್ಕೆ ಸೇವೆಗಳು ಒದಗಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇವೆಯನ್ನು ಗ್ರಾಮ ಮಟ್ಟಕ್ಕೆ ವಿಸ್ತರಿಸಬೇಕು. ಜೊತೆಗೆ ಸರ್ಕಾರಿ ಸೇವೆಯಲ್ಲಿ ಮದ್ಯವರ್ತಿಗಳನ್ನು ತಪ್ಪಿಸುವ ಮೂಲಕ ನೇರವಾಗಿ ಜನರಿಗೆ ಸೇವೆ ಒದಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಜಾಸೇವೆ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.


ಅವರು ಪ್ರಜಾಸೇವಾ ಇಲಾಖೆ, ದ.ಕ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವತಿಯಿಂದ ಶನಿವಾರ ಪುತ್ತೂರು ಪುರಭವನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಜನಪರವಾದ ಚಿಂತನೆ. ಹಿಂದೆ ಜನಸಂಪರ್ಕದಂತಹ ಕಾರ್ಯಕ್ರಮಗಳಿದ್ದವು. ಆದರೆ ಅದಕ್ಕೆ ಯಾವುದೇ ಗಡು-ನಿಮಯಗಳಿರಲಿಲ್ಲ. ಆದರೆ ಪ್ರಜಾಸೇವೆಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ 21 ದಿನಗಳ ಗಡು ನೀಡಲಾಗಿದೆ. ಕಾನೂನಾತ್ಮಕ ಸಮಸ್ಯೆಗಳಿಗೆ ಈ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಅಧಿಕಾರಿಗಳು `ಹೃದಯ’ದಿಂದ ಮಾಡಬೇಕು ಎಂದ ಸಚಿವರು ಜನತೆಯ ಕಷ್ಟ ಆಲಿಸದ ಹಾಗೂ ಕೆಲಸ ಮಾಡದ ಅಧಿಕಾರಿಗಳಿಂದ ನಿಮ್ಮ ಅರ್ಜಿಗೆ ತಕ್ಕ ಪರಿಹಾರ ಸಿಗದಿದ್ದಲ್ಲಿ ಅದರ ದೂರಿನ ವಿಚಾರಣೆಗಾಗಿ ಹೊಸ ವಿಭಾಗವನ್ನು ತೆರೆಯಲಾಗುವುದು. ಇದರ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ದೂರ ಮಾಡುವ ಚಿಂತನೆಯೂ ಆಡಗಿದೆ ಎಂದ ಅವರು ನೂರಕ್ಕೆ ನೂರು ಸಮಸ್ಯೆಗಳನ್ನು ಪರಿಹಾರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸುವ ಎಲ್ಲಾ ಸಮಸ್ಯೆಗಳು ಇಲ್ಲಿ ಪರಿಹಾರ ಕಾಣಲಿದೆ. ಆದರೆ ಜನರ ತಾಳ್ಮೆಯ ಸಹಕಾರವೂ ಅತೀ ಅಗತ್ಯವಾಗಿದೆ. ಸಮಾಜದ ಬಡವರಿಗೆ ನ್ಯಾಯ ಒದಗಿಸುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜನತೆಯ ನಂಬಿಕೆಗೆ ಅನುಗುಣವಾಗಿ ವಿಶ್ವಾಸಭರಿತ ಕೆಲಸ ಮಾಡುವುದು ಸರ್ಕಾರದ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಈ ಪ್ರಜಾಸೇವೆ ಆಂದೋಲನ ನಡೆಯಲಿದೆ ಎಂದು ಅವರು ಹೇಳಿದರು.


ಜಿಲ್ಲೆಯಲ್ಲಿ ರಾಜಕೀಯ ಬದಿಗಿಟ್ಟು ಧಾರ್ಮಿಕತೆ ಯಾವತ್ತೂ ನಮ್ಮ ದೌರ್ಬಲ್ಯವಾಗಬಾರದು. ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಸಾಮೂಹಿಕವಾದ ಜವಾಬ್ದಾರಿಯಾಗಿದೆ. ಇದು ನಾವು ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ. ಚಿಕ್ಕಪುಟ್ಟ ಘಟನೆಗಳನ್ನು ಮೇಲೈಸುವ ಸಣ್ಣತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಭೂಮಿ ನಮಗೆ ಮಾತ್ರವಲ್ಲ. ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಗರದ ರಸ್ತೆಯಲ್ಲಿ ನಮ್ಮ ಮಕ್ಕಳು ಧರ್ಮ, ಜಾತಿಯನ್ನು ಮೀರಿ ಕೈ ಕೈ ಹಿಡಿದುಕೊಂಡು ನಡೆದಾಡುವ ವಾತಾವರಣವನ್ನು ನಾವು ಮಾಡಿ ಕೊಡಬೇಕಾಗಿದೆ. ಧರ್ಮದ ಸಂದೇಶವು ಇನ್ನೊಬ್ಬರ ನೋವು ಅಳಿಸುವಂತಾಗಬೇಕು. ಶಾಂತಿ ನಮ್ಮ ಕೈಯಲ್ಲಿ ಕೊಡಿ. ನಿಮ್ಮ ಕಾಲ ಬುಡಕ್ಕೆ ನಾವು ಅಭಿವೃದ್ಧಿಯನ್ನು ಕೊಡುತ್ತೇವೆ. ನಾವು ಮುಂದೆ ಸಾಗೋಣ ಜೊತೆಗೆ ಹಿಂದಿದ್ದವರನ್ನು ಕೈ ಹಿಡಿದು ಮುನ್ನಡೆಸೋಣ ಎಂದ ಸಚಿವರು ಯುವಜನಾಂಗದ ಚಿಂತನೆಗಳಿಗೆ ಪೂರಕವಾಗಿ 1 ಸಾವಿರ ಕೋಟಿ ಅನುದಾನದ ಮೂಲಕ ಪ್ರತೀ ಗ್ರಾಮದಲ್ಲಯೂ ಜೊಡೋ ಭಾರತ್ ಸಂಘಟನೆ ಆರಂಭವಾಗಲಿದೆ. ಪ್ರತಿಯೊಂದು ಗ್ರಾಮಕ್ಕೂ ಅಲ್ಲಿಯ ಸಂಸ್ಕøತಿ, ಪರಂಪರೆ ಇದೆ. ಇದನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಈ ಸಂಘಟನೆ ಕೆಲಸ ಮಾಡಲಿದೆ ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಪೂರಕವಾಗಿ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ. ಆದರೆ ಕಾರ್ಯಾಂಗದ ಕೆಲಸ ನಿರ್ವಹಣೆ ಅತ್ಯಂತ ಸಮರ್ಪಕವಾಗಿ ಆದಾಗ ಕಾರ್ಯಕ್ರಮವೂ ಅತ್ಯಂತ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಂಗದ ಅಧಿಕಾರಿ ವರ್ಗ ಬಡ ಜನತೆ ಸಮಸ್ಯೆಗಳಿಗೆ- ನೋವುಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು. ರೈತರಿಗೆ ಆಗುತ್ತಿರುವ ಸಮಸ್ಯೆಗಳು, ತಳಮಟ್ಟದಲ್ಲಿನ ಜನತೆಯ ಕಷ್ಟಗಳ ನಿವಾರಣೆಗಳಿಗೆ ಅಧಿಕಾರಿಗಳು ಮುಂದಾಗಬೇಕು. ಈ ಹಿಂದೆ ಮನೆಗಳಿಗೆ ಎನ್ ಒಸಿ ಇಲ್ಲದೆ ವಿದ್ಯುತ್ ಸಂಪರ್ಕ ಕೊಡುತ್ತಿರಲಿಲ್ಲ. ಈಗ 2800 ಚಮೀ ಕಟ್ಟಡಕ್ಕೆ ಯಾವುದೇ ಎನ್‍ಒಸಿ ಅಗತ್ಯವಿಲ್ಲ. ಹಾಗೆಯೇ ಅಕ್ರಮ ಸಕ್ರಮ ಆ್ಯಪ್ ನಲ್ಲಿಯೂ ಸಮಸ್ಯೆ ಇದೆ. ಇದನ್ನು ಸರಿಪಡಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕಾಗಿದೆ ಎಂದರು.

ಅಹವಾಲು ಸ್ವೀಕಾರ
ಪ್ರಜಾಸೇವಾ ಆಂದೋಲನದಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೋವಿ ಪರವಾನಿಗೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಅಕ್ರಮ ಸಕ್ರಮ, ಫ್ಲ್ಯಾಟಿಂಗ್, ಆರ್‍ಟಿಸಿ, ಶಾಲಾ ಶಿಕ್ಷಕರ ಕೊರತೆ ಮತ್ತು ಅನುದಾನದ ಬೇಡಿಕೆಗಳು ಅಧಿಕಾರಿಗಳು ಸ್ವೀಕರಿಸಿದರು. ಈ ವಿಚಾರಗಳಿಗೆ ಸಂಬಂಧಿಸಿ ಪರಿಹಾರ ಪ್ರಯತ್ನ ಭರವಸೆ ನೀಡಲಾಯಿತು. ಸುಮಾರು 30 ವರ್ಷದಿಂದಲೂ ಹೆಚ್ಚು ವರ್ಷದಿಂದ ಪೋಡಿಯಾಗದೆ ಬಾಕಿ ಉಳಿದಿದ್ದ 4057 ಬಾಕಿ ಅರ್ಜಿಗಳ ಪೈಕಿ 1651 ಮಂದಿಗೆ ಪಹಣಿಪತ್ರಗಳ ವಿತರಣೆ ಮಾಡಲಾಯಿತು. ಅಗ್ನಿ ಶಾಮಕದಳದಿಂದ ಗ್ರಾಮೀಣ ಭಾಗದ 300 ಮಂದಿಗೆ ತರಬೇತಿ ನೀಡಲಾಗಿತ್ತು. ಈ ಪೈಕಿ 25 ಮಂದಿಗೆ ಸುರಕ್ಷಾ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ವಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್, ಪ್ರೊಬೆಷನರಿ ಐಎಎಸ್ ಹರ್ಷಿತ್ ಡೋಂಗ್ರೆ, ಮೆಸ್ಕಾಂ ಎಂ.ಡಿ ಹರೀಶ್ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಡೆ, ಡಿಎಫ್‍ಒ ರವಿಶಂಕರ್, ಪುತ್ತೂರು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್,ತಹಶೀಲ್ದಾರ್ ಎಸ್.ಬಿ.ಕೂಡಲಗಿ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *