ಪುತ್ತೂರಿನ ದರ್ಬೆಯಲ್ಲಿ ನಡೆದ ಮಹಿಳೆಯ ಮೇಲಿನ ಹಲ್ಲೆ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು, ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸಬೇಕೆಂದು ವಿಶ್ವಹಿಂದೂ ಪರಿಷತ್ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಶ್ವಹಿಂದೂ ಪರಿಷತ್ ನ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಜೆರಾಕ್ಸ್ ಅಂಗಡಿಯಲ್ಲಿ ನಡೆದಿರುವುದು ಗ್ರಾಹಕ ಮತ್ತು ಅಂಗಡಿ ಮಾಲಕರ ನಡುವೆ ನಡೆದ ಗೊಂದಲವಾಗಿದೆ. ತಮಗೆ ಅನ್ಯಾಯವಾಗಿದ್ದರೆ ಗ್ರಾಹಕನಿಗೆ ಗ್ರಾಹಕರ ನ್ಯಾಯಾಲಯ ಅಥವಾ ಪೋಲೀಸ್ ಇಲಾಖೆಗೆ ದೂರು ನೀಡಿ ತಮಗಾದ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.
ಆದರೆ ಈ ಗ್ರಾಹಕರು ನೇರವಾಗಿ ಮಾಲಕರಾದ ಸದಾಶಿವ ಪೈ ಅವರ ಪತ್ನಿ ಅಂಜನಾ ಪೈ, ಮಗ ಸುದರ್ಶನ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಜನರನ್ನು ಸೇರಿಸಿ ಬೀದಿ ರಂಪಾಟ ಮಾಡಿದ್ದಾರೆ. ಘಟನೆಗೆ ಸಂಬಂಧವೇ ಪಡದ ವ್ಯಕ್ತಿಗಳು ಬಂದು ಅಂಜನಾ ಒಐ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇಂದೊಂದು ನೈತಿಕ ಪೋಲೀಸ್ ಗಿರಿಯಾಗಿದ್ದು, ಹಿಂದೂ ಸಂಘಟನೆಗಳು ಧರ್ಮದ ರಕ್ಷಣೆಗೆ, ಗೋವಿನ ಮತ್ತು ಲವ್ ಜಿಹಾದ್ ಘಟನೆಗಳಾದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಕಾರ್ಯಾಚರಣೆ ನಡೆಸುವ ಸಮಯದಲ್ಲಿ ಅವರ ಮೇಲೆ ನೈತಿಕ ಪೋಲೀಸ್ ಗಿರಿ ಪ್ರಕರಣವನ್ನು ಪೋಲೀಸರು ದಾಖಲಿಸುತ್ತಾರೆ.
ಈ ಘಟನೆಯನ್ನೂ ನೈತಿಕ ಪೋಲೀಸ್ ಗಿರಿಯಂತೆಯೇ ನೋಡುವ ಅಗತ್ಯವಿದೆ. ಅಲ್ಲದೆ ಪೋಲೀಸರ ಸುಪರ್ದಿನಲ್ಲಿದ್ದ ವ್ಯಕ್ತಿಗೆ ಪೋಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸುತ್ತಾರೆಂದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಅನ್ನೋದು ಗಮನಕ್ಕೆ ಬರುತ್ರದೆ. ಪೋಲೀಸರು ಮುಂದಿನ ಎರಡು ದಿನಗಳ ಒಳಗೆ ಮಹಿಳೆಗೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಹಿಂದೂ ಸಂಘಟನೆಗಳು ಮತ್ತು ಹಿಂದೂ ಸಮಾಜ ಈ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.


