
ಬಸ್ ನಿಲ್ದಾಣದ ಸಮೀಪ ಪೇಪರ್ ಅಂಗಡಿಯಲ್ಲಿ ಅಕ್ರಮ ಚಟುವಟಿಕೆ ಆರೋಪ – ನಾಲ್ವರು ವಿರುದ್ಧ FIR ದಾಖಲು, ನಗದು ಹಾಗೂ ಮಟ್ಕಾ ಚೀಟಿಗಳು ವಶ



ಉಪ್ಪಿನಂಗಡಿ | ಜುಲೈ 30: ಉಪ್ಪಿನಂಗಡಿ ಬಸ್ ನಿಲ್ದಾಣದ ಸಮೀಪದ ಪೇಪರ್ ಅಂಗಡಿಯಲ್ಲಿ ಅಕ್ರಮ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವು ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 104/2026 ಎಂದು ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಜುಲೈ 30ರಂದು ಸಂಜೆ ಸುಮಾರು 5.10 ಗಂಟೆಗೆ ಪಿಎಸ್ಐ ಎಸ್. ಸುತೇಶ್ ಕೆ.ಪಿ. ನೇತೃತ್ವದ ತಂಡ ಪಂಚ ಸಾಕ್ಷಿಗಳ ಸಮ್ಮುಖದಲ್ಲಿ ದಾಳಿ ನಡೆಸಿತು. ಈ ವೇಳೆ ಕೇರಳ ರಾಜ್ಯ ಲಾಟರಿಯ ಬಂಪರ್ ಬಹುಮಾನ ಸಂಖ್ಯೆಗಳ ಕೊನೆಯ ಎರಡು ಹಾಗೂ ಮೂರು ಅಂಕೆಗಳ ಮೇಲೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಕ್ರಮ ಮಟ್ಕಾ ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದಲ್ಲಿ ಉಮೇಶ್ ಪೂಜಾರಿ (A1), ಸತ್ಯನಾರಾಯಣ ಪ್ರಸಾದ್ (A2), ಸತೀಶ್ ಕಾಮತ್ (A3) ಹಾಗೂ ಜಯಂತ (A4) ಅವರನ್ನು ಆರೋಪಿಗಳಾಗಿ ದಾಖಲಿಸಲಾಗಿದೆ.
ದಾಳಿಯ ವೇಳೆ ₹1,130 ನಗದು, 5 ಮಟ್ಕಾ ಚೀಟಿಗಳು ಹಾಗೂ ಒಂದು ಪೆನ್ನು ಸೇರಿದಂತೆ ಒಟ್ಟು ಸುಮಾರು ₹1,135 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112, 3(5) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ, 1963ರ 78(3) ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


