
ಮಂಗಳೂರು: ನಾಪತ್ತೆಯಾದ ಯುವತಿಯ ದ್ವಿಚಕ್ರ ವಾಹನ ಪತ್ತೆ; ಚುರುಕುಗೊಂಡ ತನಿಖೆ
ಮಂಗಳೂರಿನ ಕೋಟೆಕಾರು ಬಳಿಯ ಪಿಜಿಯಲ್ಲಿದ್ದ ಪಿಹೆಚ್ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರಂತೆ, ಚೈತ್ರಾಳ ದ್ವಿಚಕ್ರ ವಾಹನ ಸುರತ್ಕಲ್ ಬಳಿ ಪತ್ತೆಯಾಗಿದ್ದು, ವಶಕ್ಕೆ ಪಡೆದ ಉಳ್ಳಾಲ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾಳ ಮೊಬೈಲ್ ಪಂಪ್ ವೆಲ್ ಬಳಿ ಸ್ವಿಚ್ಡ್ ಆಫ್ ಆಗಿತ್ತು. ಸುರತ್ಕಲ್ ಬಳಿಯ ಎಟಿಎಂನಲ್ಲೂ ಹಣ ಡ್ರಾ ಮಾಡಿದ್ದಳು. ಪಿಹೆಚ್ಡಿ ವಿದ್ಯಾರ್ಥಿನಿಯಾಗಿದ್ದರಿಂದ ತಿಂಗಳಿಗೆ 40 ಸಾವಿರ ರೂಪಾಯಿ ಸ್ಟೈಫಂಡ್ ಬರುತ್ತಿತ್ತು. ಅದರಂತೆ ಈಕೆಯ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಇತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
ಸದ್ಯ, ಚೈತ್ರಾ ಕೇರಳ ಅಥವಾ ಬೆಂಗಳೂರು ಕಡೆ ಇರುವ ಅನುಮಾನ ವ್ಯಕ್ತವಾಗಿದೆ. ಇನ್ನೊಂದೆಡೆ, ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿರುವ ಯುವಕನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿರುವ ಕಾರಣ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬಗ್ಗೆ ಮಾತನಾಡಿದ ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನ ಬ್ಲ್ಯಾಕ್ ಮೇಲ್ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ವಾರದ ಹಿಂದೆಯೇ ಆ ಪಿಜಿಯ ಬಗ್ಗೆ ನಮ್ಮ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ಇಲಾಖೆ ತಕ್ಷಣ ಯುವತಿಯನ್ನ ಪತ್ತೆ ಮಾಡಬೇಕು. ಡ್ರಗ್ ತಡೆಯದೇ ಇದ್ದರೆ ನಾವು ಹೋರಾಟ ಮಾಡುತ್ತೇವೆ. ಯುವಕನಿಗೆ ಡ್ರಗ್ ಮಾಫಿಯಾ ಜೊತೆ ನಂಟಿದೆ. ಇದರ ಹಿಂದೆ ಇರುವ ಷಡ್ಯಂತ್ರವನ್ನ ಪೊಲೀಸರು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.
ಯುವತಿಯನ್ನು ಶೀಘ್ರದಲ್ಲಿ ಪತ್ತೆ ಮಾಡಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ ಅವರು, ಪಿಜಿ ಮಾಲೀಕರಿಗೂ ಮೂರು ತಿಂಗಳ ಹಿಂದೆ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ಪಿಜಿಯವರು ಅಸಡ್ಡೆ ತೋರಿದ್ದಾರೆ. ಮಾಹಿತಿ ಬಂದ ತಕ್ಷಣ ಮನೆಯವರಿಗೆ ತಿಳಿಸಿದ್ದೇವೆ. ಆ ಬಳಿಕ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದರು.
ಚೈತ್ರಾಳ ವರ್ತನೆಯಲ್ಲಿ ದೊಡ್ಡ ಬದಲಾವಣೆ
ಯುವಕ ತಡರಾತ್ರಿ ಈ ಪಿಜಿಗೆ ಬರುತ್ತಿದ್ದ. ಪಿಜಿಯಲ್ಲಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಹೇಳುತ್ತಿದ್ದರು. ಡ್ರಗ್ಸ್ ಮಾಫಿಯಾ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಿದೆ. ಕಳೆದ ಐದು ತಿಂಗಳ ಅಂತರದಲ್ಲಿ ಚೈತ್ರಾ ಹೆಬ್ಬಾರ್ ವರ್ತನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿತ್ತು ಎಂದು ಪಿಜಿಯಲ್ಲಿದ್ದ ಇತರೆ ವಿದ್ಯಾರ್ಥಿನಿಯರು ಹೇಳಿದ್ದಾಗಿ ತಿಳಿಸಿದರು


