ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ : ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು.

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಫೆ.25ರ ಭಾನುವಾರ ಬಿಸಿರೋಡಿನ ಕೈಕಂಬ ಎಂಬಲ್ಲಿ ಸಂಭವಿಸಿದೆ.

ಸಾವನ್ನಪ್ಪಿದ ಯುವಕ ಆಲಡ್ಕ ನಿವಾಸಿ ಆಶ್ರಫ್ (32) ಎಂದು ತಿಳಿದು ಬಂದಿದೆ.

ಸ್ನೇಹಿತನಿಗೆ ಸಹಾಯ ಮಾಡಲು ಹೋದ ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದಿದೆ. ಆಲಡ್ಕ ನಿವಾಸಿ ತನ್ವೀರ್, ಆಶ್ರಫ್ ಅವರ ಸ್ನೇಹಿತರಾಗಿದ್ದು, ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನಿಗೆ ಡ್ರಾಫ್ ಕೊಡುವ ಉದ್ದೇಶದಿಂದ ತನ್ನ ಸ್ಕೂಟರ್ ನಲ್ಲಿ ಬಿಸಿರೋಡಿಗೆ ತೆರಳಿದ್ದ.

ಬೆಳಿಗ್ಗೆ ಸುಮಾರು 5.30 ರ ವೇಳೆ ಆಶ್ರಫ್ ಕೈಕಂಬದಲ್ಲಿರುವ ತರಕಾರಿ ಅಂಗಡಿಗೆ ಇನ್ನೇನು ಸ್ನೇಹಿತ ತನ್ವೀರ್ ನ್ನು ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಖಾಲಿ ಮಾಡಿ ವಾಪಾಸ್ ಹೋಗುವ ಲಾರಿಯ ಚಾಲಕ ಲಾರಿಯನ್ನು ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಘಟನೆಯಿಂದ ಇಬ್ಬರಿಗೂ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡ ಆಶ್ರಫ್ ನನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೈಕಂಬದಲ್ಲಿರುವ ರಖಂ ತರಕಾರಿ ಅಂಗಡಿಯ ಮುಂಭಾಗದಲ್ಲಿ ಅನೇಕ ಬಾರಿ ಅಪಘಾತಗಳು ನಡೆದು ಪ್ರಾಣ ಹಾನಿಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಇಂದು ಘಟನಾ ಸ್ಥಳದಲ್ಲಿ ಕೆಲಹೊತ್ತು ಸೇರಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *