
ಪುತ್ತೂರು: ಪುತ್ತೂರು ಮತ್ತು ಕಡಬ ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯತ್ಗಳಲ್ಲಿ ಸಲ್ಲಿಸುವ ಏಕ ನಿವೇಶನ ವಿನ್ಯಾಸ ಅನುಮೋದನೆ ಕುರಿತ ಅರ್ಜಿಗಳಿಗೆ ಸಂಬಂಧಿಸಿ ೪ಕೆ ನಿಯಮಾವಳಿಗಳು ಜಾರಿಯಾಗಿರುವ ಮೊದಲು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯ ಅದಾಲತ್ ಸೆ.30ರಂದು ಶಾಸಕರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಯೋಜನಾ ಪ್ರಾಧಿಕಾರದಿಂದ ಕಡತ ವಿಲೇವಾರಿ ಕಾರ್ಯಾಗಾರ ಆಯೋಜಿಸಲಾಗಿದೆ. ಏಕ ನಿವೇಶನ ನಕ್ಕಷೆ ಈ ಮೊದಲು ಗ್ರಾಮ ಪಂಚಾಯತ್ನಲ್ಲಿ ನಡೆಯುತ್ತಿತ್ತು. ಅಲ್ಲಿ ಇದು ರಾಜಕೀಯವಾಗಿ ದುರ್ಬಳಕೆ ಆಗುತ್ತಿತ್ತು. ಬಳಿಕ ಕೋರ್ಟ್ ಆದೇಶದ ಪ್ರಕಾರ ಪ್ರಸ್ತುತ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಕಾರ್ಯ ನಡೆಯುತ್ತದೆ ಎಂದರು.
ದಕ್ಷಿಣ ಕನ್ನಡದಲ್ಲಿ ಭಗೋಳಿಕವಾಗಿ ವಿಭಿನ್ನವಾಗಿ ಇರುವ ಪ್ರದೇಶ. ಲೇಔಟ್ ಮಾಡುವಾಗ, ಮನೆ ಕಟ್ಟುವ ಸಂದರ್ಭದಲ್ಲಿ ಸರಿಯಾದ ಪ್ಲಾನಿಂಗ್ ಮಾಡದ ಕಾರಣ ಈ ಕಾನೂನು ಬಂದಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಇದು ಸಹಾಯವಾಗಲಿದೆ. ಕನ್ವರ್ಷನ್, ಸಿಂಗಲ್ ಸೈಟ್ ಮಾಡದಿದ್ದರೆ ಮನೆ ಕಟ್ಟಲು ಸಾಧ್ಯವಿಲ್ಲ. ಆದುದರಿಂದ ಇದು ನೀವು ಮಕ್ಕಳಿಗೆ ಮಾಡಿದ ಆಸ್ತಿಯಾಗದೆ ಅದು ಮಕ್ಕಳಿಗೆ ಹೊರೆಯಾಗುತ್ತದೆ ಎಂದರು. ಪುಡಾದಿಂದ ಮಾಡಿದ ಇಂದಿನ ಅದಾಲತ್ನಲ್ಲಿ ಪುತ್ತೂರು ಮತ್ತು ಕಡಬ ಸೇರಿ ಸುಮಾರು ೫೫೬ ಫೈಲುಗಳು ಬಾಕಿ ಇತ್ತು. ಕಡತಗಳಿಗೆ ಸಂಬಂಧಿಸಿದವರನ್ನು ಸಂಪರ್ಕಿಸಿದಾಗ ಇದರಲ್ಲಿ ೨೫೬ ಕಡತಗಳ ದಾಖಲೆಗಳು ಬಂದಿದ್ದು ಅದನ್ನು ಇಂದು ವಿಲೇವಾರಿ ಮಾಡಲಾಗುತ್ತದೆ. ಸದಸ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ವಿಲೇವಾರಿ ಮಾಡಿ ಆದೇಶ ಪಡೆದುಕೊಂಡು ಹೋಗಬಹುದು ಎಂದು ಹೇಳಿ ಅದಾಲತ್ ಕೈಗೊಂಡ ನಗರ ಯೋಜನಾ ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ ಮಾತನಾಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸಿಂಗಲ್ ಸೈಟ್, 9/11 ಅರ್ಜಿಗಳು ಬಹಳಷ್ಟು ಬಾಕಿಯಾಗಿತ್ತು. ಏಕವಿನ್ಯಾಸ ನಕ್ಷೆ ಅನುಮೋದನೆಗೆ ಸರಕಾರ ಕೆಲವು ಬದಾಲವಣೆ ತಂದಿತ್ತು. ಇದರಿಂದ ಗೊಂದಲ ಉಂಟಾಯಿತು. ಕಳೆದ 2 ತಿಂಗಳ ಹಿಂದೆ 800ಕ್ಕೂ ಹೆಚ್ಚಿನ ಕಡತಗಳಲ್ಲಿ ಸುಮಾರು 400ರಷ್ಟು ಕಡತಗಳಿಗೆ ಅನುಮೋದನೆ ಕೊಡಲಾಗಿತ್ತು. 556 ಕಡತಗಳಿಗೆ ದಾಖಲೆಗಳನ್ನು ನೀಡುವಂತೆ ಹಿಂಬರಹ ಕೊಟ್ಟಿದೆ. ಇದನ್ನು ವಿಲೇವಾರಿ ಮಾಡುವ ಉದ್ಧೇಶದಿಂದ ನಮ್ಮ ಸದಸ್ಯ ಕಾರ್ಯದರ್ಶಿಯ ಸೂಚನೆಯಂತೆ ಕಡತ ವಿಲೇವಾರಿಗೆ ಅದಾಲತ್ ಮಾಡುವ ಯೋಜನೆ ಹಾಕಿಕೊಂಡೆವು. ಬಳಿಕ ಶಾಸಕರ ಸಲಹೆ ಸೂಚನೆಯಂತೆ ಇಂದು ಅದಾಲತ್ ಮಾಡುತ್ತಿದ್ದೇವೆ ಎಂದ ಅವರು ಮುಂದಿನ ದಿನಗಳಲ್ಲಿ ಪ್ರತೀ 6 ತಿಂಗಳಿಗೊಮ್ಮೆ ಅದಾಲತ್ ನಡೆಸುವ ಯೋಜನೆ ಇದೆ ಎಂದರು.
ಇದೆ ಸಂದರ್ಭದಲ್ಲಿ ವಿಲೇವಾರಿಯಾದ 3 ಕಡತಗಳನ್ನು ಶಾಸಕರು ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸದಸ್ಯ,ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಅಕ್ರಮ ಸಮಿತಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
