
ದೈವದ ಹರಕೆಯ ಆಟಕ್ಕೆ ಅಡ್ಡಿ – ಠಾಣೆಯಲ್ಲೇ ಕಾದು ಕುಳಿತು ಅಧಿಕಾರಿಗಳ ಮನವೊಲಿಸಿ 17 ಮಂದಿ ಭಕ್ತರ ಬಿಡುಗಡೆಗೊಳಿಸಿದ ಶಾಸಕ ಕಿಶೋರ್ ಕುಮಾರ್



ಪುತ್ತೂರು: ವಿಟ್ಲ ಸಮೀಪದ ಇತಿಹಾಸ ಪ್ರಸಿದ್ಧ ಕೇಪು ಉಳ್ಳಾಲ್ತಿ ದೈವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಪುರಾತನ ಕಾಲದಿಂದ ನಡೆದುಕೊಂಡು ಬರುತ್ತಿರುವ ಹರಕೆ ರೂಪದ ಕೋಳಿ ಅಂಕ ಕಾರ್ಯಕ್ರಮದ ವೇಳೆ ಪೊಲೀಸರು ದಾಳಿ ನಡೆಸಿ 17 ಮಂದಿ ಭಕ್ತರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಈ ವಿಷಯ ತಿಳಿದ ತಕ್ಷಣ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಅವರು ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿಯೇ ಕಾದು ಕುಳಿತು ಇನ್ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಧಾರ್ಮಿಕ ಆಚರಣೆಯ ಹಿನ್ನೆಲೆ ಮತ್ತು ಸ್ಥಳೀಯ ಸಂಪ್ರದಾಯದ ಮಹತ್ವವನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ವಶಕ್ಕೆ ಪಡೆಯಲಾದ ಭಕ್ತರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ,
“ಇದು ಯಾವುದೇ ರೀತಿಯ ಜೂಜಾಟವಲ್ಲ. ಇದು ಕೇವಲ ಜಾನಪದ ಕ್ರೀಡೆ ಮಾತ್ರವಲ್ಲದೆ, ದೈವದ ಸನ್ನಿಧಿಯಲ್ಲಿ ಭಕ್ತರು ತಮ್ಮ ಹರಕೆಯನ್ನು ತೀರಿಸುವ ಪವಿತ್ರ ಆಚರಣೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಕಾನೂನುಬಾಹಿರ ಚಟುವಟಿಕೆಯಂತೆ ಪರಿಗಣಿಸುವುದು ಸರಿಯಲ್ಲ. ಇದು ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯ ಪ್ರತೀಕ” ಎಂದು ಹೇಳಿದರು.
ಶಾಸಕರ ಸ್ಪಷ್ಟ ನಿಲುವು ಹಾಗೂ ಸ್ಥಳೀಯ ಧಾರ್ಮಿಕ ಭಾವನೆಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು, ವಿಚಾರಣೆಯ ನಂತರ ವಶಕ್ಕೆ ಪಡೆದಿದ್ದ ಎಲ್ಲಾ 17 ಮಂದಿ ಭಕ್ತರನ್ನು ಬಿಡುಗಡೆಗೊಳಿಸಿದರು. ಜಾತ್ರಾ ಮಹೋತ್ಸವದ ಸಂಭ್ರಮದ ವೇಳೆ ಭಕ್ತರಿಗೆ ಅನಗತ್ಯ ತೊಂದರೆಯಾಗಬಾರದು ಎಂಬ ಕಾಳಜಿಯಿಂದ ಶಾಸಕರು ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಿರುವುದು ಸ್ಥಳೀಯ ಜನರಿಂದ ವ್ಯಾಪಕ ಮೆಚ್ಚುಗೆಗೆ
ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀ ಸಂಜೀವ ಮಠಂದೂರು, ಹಿರಿಯ ಮುಖಂಡರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶ್ರೀ ದಯಾನಂದ ಉಜಿರೆಮಾರ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ದೈವಭಕ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.


