
ಕಾರವಾರ, ನವೆಂಬರ್ 12: ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೇಶದಾದ್ಯಂತ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತು ಹೈ ಅಲರ್ಟ್ ಘೋಷಿಸಲಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರ, ಕಾರವಾರದ ಸೀಬರ್ಡ್ ನೌಕಾನೆಲೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಗೆ ಬಂದಿದೆ.
ಭಾರತದ ಅತಿದೊಡ್ಡ ನೌಕಾನೆಲೆಗಳಲ್ಲಿ ಒಂದಾದ ಕಾರವಾರದ ಸೀಬರ್ಡ್ ಯೋಜನಾ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನೌಕಾನೆಲೆ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಹೊರತುಪಡಿಸಿ ಯಾರಿಗೂ ಒಳ ಪ್ರವೇಶಕ್ಕೆ ಅನುಮತಿ ಇಲ್ಲ. ವಿಸಿಟರ್ ಪಾಸ್ ನೀಡುವುದಕ್ಕೂ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಯೋಜನಾ ಪ್ರದೇಶದ ಗಡಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಮುದ್ರ ಮಾರ್ಗದಲ್ಲಿ ಯಾವುದೇ ಸಂಶಯಾಸ್ಪದ ಚಟುವಟಿಕೆ ನಡೆಯದಂತೆ ನೌಕಾಪಡೆ ಹಾಗೂ ಕೋಸ್ಟ್ ಗಾರ್ಡ್ಗಳು ಪೆಟ್ರೋಲಿಂಗ್ ನಡೆಸುತ್ತಿವೆ. ರಡಾರ್ ಸರ್ವೇಲೆನ್ಸ್, ಪೆಟ್ರೋಲ್ ಬೋಟ್ಗಳು ಮತ್ತು ನೈಟ್ ಪೆಟ್ರೋಲಿಂಗ್ ಬಲಪಡಿಸಲಾಗಿದೆ.
ಪೊಲೀಸ್ ಇಲಾಖೆಯು ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ತಪಾಸಣೆ ಆರಂಭಿಸಿದ್ದು, ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ತಂಡಗಳನ್ನು ಬಳಸಲಾಗಿದೆ. ಜಿಲ್ಲಾ ಎಸ್ಪಿ ದೀಪನ್ ಎಂ.ಎನ್. ಅವರ ನೇತೃತ್ವದಲ್ಲಿ ಸೋಮವಾರ ತಡರಾತ್ರಿ 2.30ರವರೆಗೆ ಶೋಧ ಕಾರ್ಯ ನಡೆಯಿತು. ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಬಂದರು, ಕ್ರಿಮ್ಸ್ ಆಸ್ಪತ್ರೆ ಹಾಗೂ ಮಾಜಾಳಿ ಚೆಕ್ಪೋಸ್ಟ್ ಪ್ರದೇಶಗಳಲ್ಲಿ ಪ್ರತ್ಯೇಕ ತಂಡಗಳು ಪರಿಶೀಲನೆ ನಡೆಸಿದವು.
ಮಂಗಳವಾರ ಬೆಳಗ್ಗೆಯಿಂದಲೇ ಅಂಕೋಲಾ, ಗೋಕರ್ಣ, ಕುಮಟಾ, ಮುರುಡೇಶ್ವರ, ಭಟ್ಕಳ ಸೇರಿದಂತೆ ಕರಾವಳಿ ಭಾಗದ ರೈಲ್ವೇ ನಿಲ್ದಾಣಗಳು, ಬಸ್ ಸ್ಟ್ಯಾಂಡ್ಗಳು, ದೇವಸ್ಥಾನಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ಕೈಗಾ ಅಣುಸ್ಥಾವರ ಸುತ್ತಮುತ್ತ 24 ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ನಿಗಾವಹಿಸುತ್ತಿದ್ದಾರೆ.
ಗೋವಾ ಗಡಿಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್: ಮುಂಜಾಗ್ರತಾ ಕ್ರಮವಾಗಿ ಗೋವಾ, ಭಟ್ಕಳ ಮತ್ತು ರಾಮನಗರ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜಿಲ್ಲೆಗೆ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಕೂಲಂಕಷವಾಗಿ ತಪಾಸಿಸಲಾಗುತ್ತಿದೆ. ಮಾಜಾಳಿ ಪ್ರದೇಶದಲ್ಲಿ ಗೋವಾದಿಂದ ಬರುವ ವಾಹನಗಳನ್ನು ಪೊಲೀಸರು ಹಾಗೂ ಅಬಕಾರಿ ಇಲಾಖೆ ತಪಾಸಣೆ ನಡೆಸುತ್ತಿದ್ದಾರೆ.


