
ಬೆಂಗಳೂರು, ನ. 5: ಆರೋಪಿಗೆ ಪೊಲೀಸ್ ಸಮನ್ಸ್ ನೀಡುವಾಗ ಎಫ್ಐಆರ್ ಸಂಖ್ಯೆ ಮತ್ತು ಪ್ರಕರಣದ ವಿವರ ನೀಡದೇ ಕೇವಲ “ಥಾಣೆಗೆ ಬನ್ನಿ” ಎನ್ನುವ ನೋಟಿಸ್ ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪತ್ರಕರ್ತ ಟಿ.ಆರ್. ಶಿವಪ್ರಸಾದ್ ವಿರುದ್ಧ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಿದೆ.
ಅಮೃತಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಟಿ.ಆರ್. ಶಿವಪ್ರಸಾದ್ ಅವರಿಗೆ ವಾಟ್ಸ್ಆಪ್ ಮೂಲಕ “ನೀವು ಠಾಣೆಗೆ ಹಾಜರಾಗಬೇಕೆಂದು” ಸಂದೇಶ ಕಳುಹಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋದರು.
ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದು, ಪೊಲೀಸರ ಸಮನ್ಸ್ನಲ್ಲಿ ಈ ಕೆಳಗಿನ ಅಂಶಗಳು ಕಡ್ಡಾಯವಾಗಿ ಇರಬೇಕು:
ಎಫ್ಐಆರ್ ಸಂಖ್ಯೆ,
ಪ್ರಥಮ ವರ್ತಮಾನ ಮಾಹಿತಿ (FIR) ನಕಲು,
ಅಪರಾಧದ ಸಂಕ್ಷಿಪ್ತ ವಿವರಣೆ,
ಮತ್ತು ಈ ಮಾಹಿತಿಯುಳ್ಳ ಚೆಕ್ಲಿಸ್ಟ್.
ಈ ಅಂಶಗಳನ್ನು ನೀಡದೇ ಸಮನ್ಸ್ ನೀಡಿದಲ್ಲಿ ಆರೋಪಿಗಳು ಠಾಣೆಗೆ ಹಾಜರಾಗಬೇಕಿಲ್ಲ. ಅಲ್ಲದೆ, ಇಂತಹ ಸಂದರ್ಭಗಳಲ್ಲಿ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ತೀರ್ಮಾನಿಸಿದೆ.
ಹೈಕೋರ್ಟ್ ತೀರ್ಪಿನ ಪ್ರಕಾರ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ – 2023ರ ಕಲಂ 35 ಅನುಸಾರ ಚೆಕ್ಲಿಸ್ಟ್ ಒದಗಿಸದಿದ್ದರೆ ಆರೋಪಿಯು ಹಾಜರಾಗಬೇಕಾದ ಕಡ್ಡಾಯವಿಲ್ಲ.
ಇದೊಂದಿಗೇ, ಸಾರ್ವಜನಿಕರ ಅರಿವಿಗಾಗಿ ರಾಜ್ಯದ ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು (DGP) ಸೂಕ್ತ ಮಾರ್ಗಸೂಚಿ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ತೀರ್ಪು ಪೊಲೀಸರ ಕಾರ್ಯವಿಧಾನದಲ್ಲಿ ಪಾರದರ್ಶಕತೆ ತರಲು ಹಾಗೂ ಆರೋಪಿಗಳ ಹಕ್ಕುಗಳನ್ನು ರಕ್ಷಿಸಲು ಪ್ರಮುಖ ಹೆಜ್ಜೆ ಎಂದು ಕಾನೂನು ವಲಯದಲ್ಲಿ ಪರಿಗಣಿಸಲಾಗಿದೆ.


